ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಪ್ರಗತಿಯ ಪ್ರತಿಮೆಯು ನ. 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಆಗಲಿದ್ದು, ಕಾರ್ಯಕ್ರಮದಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ. ವೆಂಕಟೇಗೌಡ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಮಹಾನಗರ ನಿರ್ಮಾಣ ಮಾಡಿ, ನಮ್ಮ ಹಿರಿಯರು ಸೇರಿದಂತೆ ಜನರ ಭವಿಷ್ಯದ ಬದುಕು ನಿರ್ಮಾಣ ಮಾಡಿಕೊಡಲು ಅನುವು ಮಾಡಿಕೊಟ್ಟ ಶ್ರೇಷ್ಠ ನಾಯಕರ ಉತ್ಸವದಲ್ಲಿ ಎಲ್ಲರೂ ಭಾಗಿಯಾಗೋಣ’ ಎಂದು ತಿಳಿಸಿದರು.
‘ಐದು ಶತಮಾನಗಳ ಹಿಂದೆಯೇ ಎಲ್ಲಾ ಸಮುದಾಯದವರು ವ್ಯಾಪಾರ ವಹಿವಾಟು ಮಾಡಲು ಅನೇಕ ಪೇಟೆಗಳು, ಕೆರೆ–ಕಟ್ಟೆಗಳನ್ನು ನಿರ್ಮಿಸಿದರು. ಸುಭದ್ರ ನಗರದ ಕಲ್ಪನೆ ನೀಡಿದ ಮಹಾಪುರುಷರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಭಾಗವಹಿಸೋಣ’ ಎಂದು ಮುಖಂಡ ಜೊನ್ನಹಳ್ಳಿ ಮುನಿರಾಜು ತಿಳಿಸಿದರು.