ಹೊಸಕೋಟೆ: ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬಾರದಂತೆ ಮುಂಜಾಗೃತೆವಹಿಸುವುದು ಸೂಕ್ತ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ನಗರದ ಆಯುಷ್ ಆಸ್ಪತ್ರೆ ವತಿಯಿಂದ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಆಯುಷ್ ಇಮ್ಯೂನಿಟಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯುಷ್ ವೈದ್ಯೆ ಡಾ.ನಿರ್ಮಲಾ ಮಾತನಾಡಿ, ಕೊರೊನಾ ಸೋಂಕಿನ ಹಾವಳಿ ತಡೆಯಲು ಭಾರತೀಯ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆಯಿದೆ. ಇದರಿಂದ ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿದಿನ ಸಾರ್ವಜನಿಕ ಸಂಪರ್ಕದಲ್ಲಿರುವ ಆಶಾ ಕಾರ್ಯಕರ್ತೆಯರು ಈ ಕಿಟ್ನಲ್ಲಿರುವ ಔಷಧಿ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ಸೋಂಕು ತಗುಲಿದರೂ ಅದನ್ನು ಸೂಕ್ತವಾಗಿ ನಿಭಾಯಿಸುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನ 234 ಆಶಾ ಕಾರ್ಯಕರ್ತೆಯರಿಗೆ ಆಯುಷ್ ಇಲಾಖೆಯಿಂದ ಕಿಟ್ ವಿತರಿಸಲಾಯಿತು.
ಆಯುಷ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸರಸ್ವತಿ ನಾವಳ್ಳಿ, ಆಡಳಿತಾಧಿಕಾರಿ ಸತೀಶ್, ಡಾ.ರಾಘವೇಂದ್ರ, ನರೇಶ್ ಹಾಜರಿದ್ದರು.