ದೊಡ್ಡಬಳ್ಳಾಪುರ: ‘ತಾಲ್ಲೂಕಿನಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈ ದಿಸೆಯಲ್ಲಿ ನಗರದಲ್ಲಿ ಸುಸಜ್ಜಿತ ಬಯಲು ರಂಗ ಮಂದಿರ ನಿರ್ಮಾಣದ ಅಗತ್ಯವಿದೆ’ ಎಂದು ನಗರಸಭೆ ಸದಸ್ಯ ಟಿ.ಎನ್. ಪ್ರಭುದೇವ್ ಹೇಳಿದರು.
ಶ್ರೀಪ್ರಸನ್ನ ವೆಂಕಟರಮಣ ಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ತಾಲ್ಲೂಕು ಕಲಾವಿದರ ಸಂಘ, ಅನಿಕೇತನ ಟ್ರಸ್ಟ್, ನಗರಸಭೆಯಿಂದ ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬಯಲು ರಂಗಮಂದಿರ ನಿರ್ಮಾಣ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ನಗರಸಭೆ ಬಜೆಟ್ನಲ್ಲಿ ಈ ಹಿಂದೆ ₹ 20 ಲಕ್ಷ ಮೀಸಲಿರಿಸಲಾಗಿತ್ತು. ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯದೆ ವಿಳಂಬವಾಗಿದೆ. ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳ ಸಹಕಾರವಿದ್ದರೆ ರಂಗಮಂದಿರ ನಿರ್ಮಾಣ ಮಾಡಲು ಅನುಕೂಲವಾಗಲಿದೆ ಎಂದರು.
ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಕಲಾವಿದರಿಗೆ ಉತ್ತೇಜನ ನೀಡುವಲ್ಲಿ ಸರ್ಕಾರದ ಹಲವಾರು ಯೋಜನೆಗಳಿದ್ದು, ಸದುಪಯೋಗವಾಗಬೇಕಿದೆ. ಕಲೆಗೆ ಉತ್ತೇಜನ ನೀಡಬೇಕಿದ್ದು, ಕಲಾವಿದರಿಗೆ ಸೌಲಭ್ಯ ಒದಗಿಸಿಕೊಡಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾಗೃತ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಪಿ. ಆಂಜನೇಯ, ನಗರಸಭೆ ಸದಸ್ಯರಾದ ಎಂ. ಮಲ್ಲೇಶ್, ಆರ್. ಪ್ರಭಾ ನಾಗರಾಜ್, ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷ ಎಂ. ಕಾಂತರಾಜು, ಕನ್ನಡ ಪಕ್ಷದ ಮುಖಂಡರಾದ ಎಂ. ಸಂಜೀವ್ ನಾಯಕ್, ತಾಲ್ಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್, ಖಜಾಂಚಿ ಮುನಿಪಾಪಯ್ಯ, ನಿರ್ದೇಶಕರಾದ ಸಿ.ಎಚ್. ಕೃಷ್ಣಮೂರ್ತಿ, ಎಂ. ವೆಂಕಟರಾಜು, ಯಕ್ಷಗಾನ ಕಲಾವಿದ ಕೆ.ಸಿ. ನಾರಾಯಣ್, ಶಿಕ್ಷಕ ಎಚ್.ಎನ್. ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಡಿ. ಶ್ರೀಕಾಂತ, ನಂದಕುಮಾರ್, ಜಿ. ರಾಮು, ಪ್ರಕಾಶ್ ರಾವ್ ಇದ್ದರು.
ನಾಟಕೋತ್ಸವದ ಅಂಗವಾಗಿ ಸಮಷ್ಟಿ ಕಲಾತಂಡದ ದಿವಾಕರ್ ಅವರಿಂದ ‘ಸ್ಮಶಾನ ಕುರುಕ್ಷೇತ್ರಂ’ ಏಕವ್ಯಕ್ತಿ ನಾಟಕ, ನಾಟ್ಯ ಮಯೂರಿ ಕಲಾ ಕೇಂದ್ರದಿಂದ ಭರತ ನಾಟ್ಯ, ಚಿನ್ನುಪ್ರಕಾಶ್ ಸಂಗಡಿಗರಿಂದ ಗೀತ ಗಾಯನ ನಡೆಯಿತು. ಶ್ರೀಅಭಯ ಆಂಜನೇಯ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.