ಸೂಲಿಬೆಲೆ: ‘ವಿಧಾನಸಭೆ ಚುನಾವಣೆಯಲ್ಲಿ ಕೆಲಮತಗಳಿಂದ ಸೋಲಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲುಇನ್ನೂ ಮೂರುವರೆ ವರ್ಷಗಳ ಕಾಲ ಕಾಯಬೇಕಿತ್ತು. ಅದೃಷ್ಟವಶಾತ್ ಉಪಚುನಾವಣೆಯಲ್ಲಿನ ಗೆಲುವು ಹೊಸಕೋಟೆ ತಾಲ್ಲೂಕಿನ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಅದಕ್ಕಾಗಿ ದುಡಿಯುತ್ತೇನೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಹೋಬಳಿಯ ಎಂ.ಸತ್ಯವಾರ ಗ್ರಾಮದಲ್ಲಿ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ಎಲ್ಲರ ಸೇವಕನಾಗಿದ್ದು, ಯಾವುದೇ ಜಾತಿ, ಧರ್ಮ, ಮತ ಭೇದವಿಲ್ಲದೆ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದರು.
‘ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ, ಉಪಚುನಾವಣೆ ಎದುರಾಯಿತು. ಕಳೆದ ಒಂದು ವರ್ಷ ಚುನಾವಣೆಯಲ್ಲೇ ಕಳೆದು ಹೋಯಿತು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಸಮಯ ಮೀಸಲಿಡುವ ಜತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿದ್ದು ಕಾರ್ಯಕರ್ತರು ಸಿದ್ಧರಾಗಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ್, ಮುಖಂಡರಾದ ಗೋಪಾಲಪ್ಪ, ಶ್ರೀನಿವಾಸ ಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.