ದೇವನಹಳ್ಳಿ: ಸಾಮರಸ್ಯದ ತತ್ವದಡಿಯಲ್ಲಿ ಪಟ್ಟಣದ ಕದ್ದೂಸ್ ಬಡಾವಣೆಯಲ್ಲಿರುವ ಅಮಿನ ಮಸೀದಿಯಲ್ಲಿ ರಂಜಾನ್ ಮಾಸದ ಪ್ರಯುಕ್ತ ಇಫ್ತಾರ್ ಕೂಟವನ್ನು ಎಲ್ಲ ಧರ್ಮದ ಜನರಿಗೆ ಮಂಗಳವಾರ ಏರ್ಪಡಿಸಲಾಗಿತ್ತು.
ಇಫ್ತಾರ್ ಕೂಟಕ್ಕೆ ಚಾಲನೆ ನೀಡಿದ ಮಸೀದಿಯ ಅಧ್ಯಕ್ಷ ಕುದ್ದೂಸ್ ಪಾಷ ಮಾತನಾಡಿ, ರಂಜಾನ್ ಹಬ್ಬವು ಬಹಳ ಪವಿತ್ರದಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ನೆರೆಹೊರೆಯವರೆಲ್ಲರೂ ಒಗ್ಗೂಡಿ ಯಾವುದೇ ಭೇದಭಾವವಿಲ್ಲದೆ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಮುಸ್ಲಿಂ ಮಹಿಳೆಯರು ಇಲ್ಲಿನ ಅಮೀನ ಮಸೀದಿಯಲ್ಲಿ ಪ್ರಾರ್ಥನೆಗೆ ಬರುತ್ತಿದ್ದು, ಜತೆಗೆ ಅನ್ಯಧರ್ಮಿಯರು ಸಹ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸಾಮೂಹಿಕ ಇಫ್ತಾರ್ ಕೂಟದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಆವತಿ ಮಸೀದಿ, ಜಾಮೀಯ ಅಹಲೇ ಅಹದೀಸ್ ಮಸೀದಿ ಮತ್ತು ವಿನಾಯಕ ನಗರದ ಮಸೀದಿಯಲ್ಲಿಯೂ ಸಹ ಇಫ್ತಾರ್ ಏರ್ಪಡಿಸಲಾಗಿತ್ತು.