ದೇವನಹಳ್ಳಿ: ಆಧುನಿಕತೆಯ ಭರಾಟೆಯಲ್ಲಿ ಹೆಚ್ಚುತ್ತಿರುವ ಸ್ವರ್ಧೆಯಲ್ಲಿ ಶಿಕ್ಷಣ ಮೆದುಳಿಗಷ್ಟೆ ಸೀಮಿತವಾಗಿರದೆ ಮನಸ್ಸಿಗೂ ನೀಡಬೇಕು ಎಂದು ಕಸ್ಟಮ್ ಆಂಡ್ ಜಿ.ಎಸ್.ಟಿ ಹಾಗೂ ಐ.ಎಸ್.ಆರ್. ಹೆಚ್ಚುವರಿ ಆಯುಕ್ತ ಹರ್ಷವರ್ಧನ ಉಮ್ರ ಹೇಳಿದರು.
ಇಲ್ಲಿನ ಮುತ್ತಗದಹಳ್ಳಿ ಬಳಿ ಇರುವ ಐ.ಐ.ಬಿ.ಎಸ್ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಮಿತ್ರ ಬಳಗದ ವತಿಯಿಂದ 2018–19 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಅರ್ಥಿಕ ಅಭಿವೃದ್ಧಿಗೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು, ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ, ಶಿಕ್ಷಣವೆಂಬುದು ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮಾನವ ಸಂಪನ್ಮೂಲ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ದೇಶದ ಜಿಪಿಡಿ ವೃದ್ಧಿಯಾಗಲಿದೆ ಎಂದರು.
ದೇಶದಲ್ಲಿ ವಿವಿಧ ರೀತಿಯ ಪ್ರಾಕೃತಿಕ ಸಂಪನ್ಮೂಲ ಕೊರತೆ ಇಲ್ಲ ಬಳಕೆ ಮಾಡುವಲ್ಲಿ ಕೊರತೆಯಾಗಿದೆ, ಒಂದೊಂದು ನಿಮಿಷವು ವಿದ್ಯಾರ್ಥಿಗಳಿಗೆ ಅತಿಮುಖ್ಯ. ಹಲವು ಕ್ಷೇತ್ರಗಳಿವೆ ಮುಕ್ತವಾಗಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಸಮಾಜಸೇವಕ ಹರಿರಾಮ್ ಮಾತನಾಡಿ, ‘ವಿದ್ಯಾರ್ಥಿಗಳು ತಾವು ಬೆಳೆಯುವುದರೊಂದಿಗೆ ತಮ್ಮ ಸಮುದಾಯದ ಬೆಳವಣಿಗೆಗೂ ಒತ್ತು ನೀಡಬೇಕು. ಹುಟ್ಟಿದ ಮನುಷ್ಯನಿಗೆ ಆಸೆ ಸಹಜ, ಅತಿಯಾಸೆ ಬೇಡ, ಮಾನವೀಯ ಮೌಲ್ಯದ ಜತೆಗೆ ನೈತಿಕತೆಯು ಮುಖ್ಯ’ ಎಂದು ಕಿವಿ ಮಾತು ಹೇಳಿದರು.
ಐ.ಐ.ಬಿ.ಎಸ್ ಕಾಲೇಜು ಆಡಳಿತ ಸಂಸ್ಥೆ ಅಧ್ಯಕ್ಷ ಡಾ.ಜೈ. ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕು, ಕಟ್ಟ ಕಡೆಯ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಉನ್ನತ ಶಿಕ್ಷಣಕ್ಕೆ ಸಂಸ್ಥೆ ಎಲ್ಲಾ ಸಮುದಾಯಕ್ಕೂ ಒಂದೇ ರೀತಿಯ ಸಹಕಾರ ನೀಡುತ್ತಿದೆ ಎಂದರು.
ಸರ್ವೋದಯ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ, ಯಲಹಂಕ ಉಪವಿಭಾಗ ಎ.ಸಿ.ಪಿ ಬಷೀರ್ ಅಹಮದ್, ಸಮಾಜ ಸೇವಕ ರಾಜಶೇಖರ್, ಪ್ರಾಂಶುಪಾಲ ಡಾ. ತ್ರಿಪುರನೆ ನಿಜಗ್ಗಯ್ಯ, ಕಾಲೇಜಿನ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.