ಆನೇಕಲ್ : ತಾಲ್ಲೂಕಿನ ಇಂಡ್ಲವಾಡಿಪುರದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹಸಿರು ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇಂಡ್ಲವಾಡಿಪುರದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯ, ಎರಿನ್ ಪ್ರತಿಷ್ಠಾನ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಿಡ ನೆಡುವ ಕಾರ್ಯಕ್ರಮ ಮತ್ತು ಆನೇಕಲ್ ಸಮೀಪದ ಗುಡ್ಡನಹಳ್ಳಿ ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಮಾತನಾಡಿ, ಪರಿಸರ ಹಸಿರಾಗಿದ್ದರೆ ನಾಡು ಸಮೃದ್ಧಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಗಿಡ ಮರ ಬೆಳೆಸುವ ಸಂಕಲ್ಪ ಮಾಡಬೇಕು. ಕಾಡುನಾಶವಾಗಿ ಕಾಂಕ್ರಿಟ್ ಕಾಡುಗಳು ನಿರ್ಮಾಣವಾಗುತ್ತಿದೆ. ಇದರಿಂದ ಮನುಕುಲಕ್ಕೆ ಸಿಗಬೇಕಾದ ಗಾಳಿ, ನೀರಿಗೂ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದರು.
ಅಲಯಯನ್ಸ್ ವಿಶ್ವವಿದ್ಯಾಲಯ ಪರಿಸರ ಸ್ನೇಹಿ ಚಟುವಟಿಕೆ ರೂಪಿಸುವ ನಿಟ್ಟಿನಲ್ಲಿ ವಿವಿಧ ಕ್ರಮವ ಹಿಸಲಾಗಿದೆ. ಎಲ್ಇಡಿ ಲೈಟ್ ಬಳಕೆ, ಸೋಲಾರ್ ಸದ್ಭಳಕೆ, ನೀರಿನ ಮಿತ ಬಳಕೆ, ತ್ಯಾಜ್ಯ ನೀರು ಶುದ್ಧೀಕರಣಗೊಳಿಸಿ ಮರುಬಳಕೆ, ಗಿಡ ಮರಗಳಿಗಾಗಿ ಹನಿ ನೀರವಾರಿ ಯೋಜನೆ ಸೇರಿದಂತೆ ವಿವಿಧ ಕ್ರಮ ವಹಿಸಲಾಗಿದೆ.
ಆನೇಕಲ್ ತಾಲ್ಲೂಕಿನ ಗುಡ್ಡನಹಳ್ಳಿ ಕೆರೆಯಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಿಸರ ದಿನಾಚರಣೆಯ ಪ್ರಯುಕ್ತ ಶ್ರಮದಾನ ನಡೆಸಿದರು
ಪ್ರತಿ ಮನೆಯಲ್ಲಿಯೂ ಪರಿಸರ ಸ್ನೇಹಿ ಚಟುವಟಿಕೆಗೆಗೆ ಬಲ ನೀಡಬೇಕು. ಹಸಿರು ವಾತಾವರಣದಿಂದ ಮಾತ್ರ ಜೀವನ ಉತ್ತಮವಾಗಲಿದೆ. ಯುವ ಸಮುದಾಯ ಪೆಟ್ರೋಲ್ ವಾಹನ ಬಿಟ್ಟು ಎಲೆಕ್ಟ್ರಿಕ್ ವಾಹನ ಬಳಸುವ ಮೂಲಕ ಪರಿಸರ ಸ್ನೇಹಿ ಚಟುವಟಿಕೆ ಅಳವಡಿಸಿಕೊಳ್ಳಬೇಕು ಎಂದರು.