ವಿಜಯಪುರ(ದೇವನಹಳ್ಳಿ): ಪಟ್ಟಣದ ರೋಜ್ಗಾರ್ ಕಚೇರಿಯಲ್ಲಿ ಗುರುವಾರ ಪುರಸಭೆ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಕಣ್ಣಿನ ತಪಾಸಣೆಯಲ್ಲಿ 96 ಮಂದಿ ತಪಾಸಣೆಗೆ ಒಳಗಾದರು, ಅದರಲ್ಲಿ 42 ಮಂದಿಗೆ ಕಣ್ಣಿನ ದೋಷ ಇರುವುದು ತಿಳಿದು ಬಂದಿದೆ.
ಇಷ್ಟು ಮಂದಿಗೂ ಉಚಿತವಾಗಿ ಚಿಕಿತ್ಸೆ ನೀಡಲು ದೇವನಹಳ್ಳಿಯ ದೃಷ್ಟಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.
ಶಿಬಿರ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ವಿಮಲಾ ಬಸವರಾಜ್ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡಲು ದುಡಿಯುತ್ತಿರುವ ಪ್ರತಿಯೊಬ್ಬ ಪೌರಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಗಮನ ನೀಡಬೇಕು. ಅದರಲ್ಲೂ ಕಣ್ಣಿನ ಬಗ್ಗೆ ಕಾಳಜಿವಹಿಸಬೇಕು. 40 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಂದಾಯ ನಿರೀಕ್ಷಕ ತ್ಯಾಗರಾಜ್ ಮಾತನಾಡಿ, ಇತ್ತೀಚಿಗೆ ಪ್ರತಿಯೊಬ್ಬರೂ ಸ್ಮಾರ್ಟ್ಪೋನ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ. ಇದರಿಂದಲೂ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಸಾಧ್ಯವಾದಷ್ಟು ಕಾರ್ಮಿಕರು ರಕ್ತದೊತ್ತಡ, ಮಧುಮೇಹ ಬಾರದಂತೆ ಎಚ್ಚರಿಕೆ ವಹಿಸಬೇಕು. ಬಂದಿರುವವರು ಆರೋಗ್ಯ ಸುಧಾರಣೆಗೆ ಗಮನಹರಿಸಿ ಎಂದರು.
ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಕಂದಾಯ ಅಧಿಕಾರಿ ಚಂದ್ರು, ನಮ್ಮ ಕ್ಲಿನಿಕ್ ಸಿಬ್ಬಂದಿ ಭೀಮರಾವ್, ರೋಜ್ ಗಾರ್ ಕಚೇರಿಯ ಸಂಪನ್ಮೂಲ ಅಧಿಕಾರಿ ಶಿವನಾಗೇಗೌಡ, ಲಿಂಗಣ್ಣ, ಮೇಸ್ತ್ರೀ ನಾಗರಾಜ್, ಲಕ್ಷ್ಮಣ್, ದೃಷ್ಟಿ ಕಣ್ಣಿನ ಆಸ್ಪತ್ರೆಯ ವೈದ್ಯ ಚಿಕ್ಕನಗೌಡ, ಹಾಜರಿದ್ದರು.