ದೇವನಹಳ್ಳಿ: ‘ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಾ.ಎಂ. ರವಿಕುಮಾರ್ ಬದುಕು ಕಿರಿಯ ವೈದ್ಯರಿಗೆ ಮಾದರಿಯಾಗಬೇಕು’ ಎಂದು ಖಾದಿ ಬೋರ್ಡ್ ನಿರ್ದೇಶಕ ಕೊನಗಿನಬೆಲೆ ನಾರಾಯಣಸ್ವಾಮಿ ಹೇಳಿದರು.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ.ಎಂ. ರವಿಕುಕುಮಾರ್ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ ನಂತರ ಅವರು ಮಾತನಾಡಿದರು.
ತಳ ಸಮುದಾಯದಲ್ಲಿ ಹುಟ್ಟಿ ಬಡತನವನ್ನು ಲೆಕ್ಕಿಸದೆ ಕೂಲಿ ಕೆಲಸ ಮಾಡಿ ಹಗಲು–ರಾತ್ರಿ ಶ್ರಮಪಟ್ಟು ವ್ಯಾಸಂಗ ಮಾಡಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದು ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಗಣನೀಯ ಸೇವೆ ಗುರುತಿಸಿ ಸರ್ಕಾರ ಅವರಿಗೆ ಅವಕಾಶ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಚಂದ್ರು ಮಾತನಾಡಿ, ‘ರವಿಕುಮಾರ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ, ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಶಿಸ್ತು, ಕಾರ್ಯಕ್ಷಮತೆಯು ಅನುಕರಣೀಯವಾಗಿದೆ ಎಂದರು.