ದೇವನಹಳ್ಳಿ: ಜಿಲ್ಲೆಯ ನೆಲಮಂಗಲ, ಹೊಸಕೋಟೆಯಲ್ಲಿ ಭ್ರೂಣ ಹತ್ಯೆ, ಗರ್ಭಪಾತ ಪ್ರಕರಣದ ವರದಿ ಸಲ್ಲಿಕೆ ವಿಚಾರವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ಮುಸುಕಿನ ಗುದ್ದಾಟ ಮುಂದುವರಿದಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುನೀಲ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ‘ನೆಲಮಂಗಲದ ಆಸರೆ ಆಸ್ಪತ್ರೆ, ಹೊಸಕೋಟೆ ಎಸ್ಪಿಜೆ ಮತ್ತು ಓವಂ ಆಸ್ಪತ್ರೆ ಪ್ರಕರಣದಲ್ಲಿ ಆಡಳಿತಾತ್ಮಕ ಲೋಪ ಕಂಡು ಬಂದಿರುವುದು ಸತ್ಯ’ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಆರ್.ಮಂಜುನಾಥ್, ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ, ಗರ್ಭಾವಸ್ಥೆಯ ವೈದ್ಯಕೀಯ ಕಾಯ್ದೆ (ಎಂಟಿಪಿ) ಅನುಷ್ಠಾನದಲ್ಲಿ ಎಡವಿದ್ದಾರೆ ಎಂದು ದೂರಿದರು.
ಕಾಯ್ದೆ ಅನುಷ್ಠಾನಕ್ಕೆ ಜಿಲ್ಲಾಮಟ್ಟದಲ್ಲಿ ರಚನೆಯಾಗಿರುವ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ದಾಳಿ ನಡೆಸಿ ಪ್ರಕರಣ ದಾಖಲು ಮಾಡಬೇಕು. ಅದನ್ನು ಸಕ್ಷಮ ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಇದ್ಯಾವುದನ್ನು ಡಾ.ಎಸ್.ಆರ್.ಮಂಜುನಾಥ್ ಪಾಲಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ವಿದ್ಯಮಾನ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎನ್.ಶಿವಶಂಕರ್, ‘ಡಿಎಚ್ಒ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಅದನ್ನು ಸರಿಪಡಿಸಲಾಗುವುದು’ ಎಂದರು.