ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರ ಸರ್ಕಾರಿ ಶಾಲೆಯ ಆವರಣದಲ್ಲಿ ಮರ ಕಡಿದಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಮರದ ಕಡಿದ ವಿಚಾರವಾಗಿ ಪ್ರಜಾವಾಣಿಯಲ್ಲಿ ‘ಕೊಯಿರಾ ಶಾಲೆಯ ಮರಗಳಿಗೆ ಕೊಡಲಿ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.22 ರಂದು ಅರಣ್ಯ ಇಲಾಖೆಯ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ಈ ಕುರಿತು ದೇನಹಳ್ಳಿ ತಾಲ್ಲೂಕು ನ್ಯಾಯಾಲಯದಲ್ಲಿ ಅನುಮತಿ ಪಡೆದುಕೊಂಡಿರುವ ವಲಯ ಅರಣ್ಯಾಧಿಕಾರಿ ಕೊಯಿರ ಗ್ರಾಮದ ಲಕ್ಷ್ಮಮ್ಮ, ಆಂಜನಮ್ಮ ಮತ್ತು ಮುನೇಗೌಡ ಎಂಬುವವರು ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಶಾಲಾ ಆವರಣದಲ್ಲಿ ಒಟ್ಟು ನಾಲ್ಕು ಮರಗಳನ್ನು ಕಡಿದಿದ್ದು, ಅವುಗಳು ಅಂದಾಜು ಎತ್ತರ 8 ಮೀಟರ್ಗಳಿದ್ದು, ಸರಾಸರಿ 1.6 ಮೀಟರ್ ಬುಡದ ಸುತ್ತಳತೆ ಇರುವ ಸ್ವೀವರ್ ಓಕ್ ಮರಗಳನ್ನು ಅಕ್ರಮವಾಗಿ ಕತ್ತರಿಸಿ ಸಾಗಾಟ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆ ಪ್ರಗತಿಯಲ್ಲಿದ್ದು, ಕಡಿದ ಮರಗಳ ಸಾಗಣೆ ಉಪಯೋಗಿಸಿರುವ ವಾಹನದ ಜಪ್ತಿ, ಮರಗಳ ಅವಶೇಷಗಳನ್ನು ವಶಕ್ಕೆ ಪಡೆಯಬೇಕಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.