ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಇದೆ.
ಬೆಟ್ಟದ ಸಾಲಿನ ಕುರುಚಲು ಕಾಡಿಗೆ ಹೊಂದಿಕೊಂಡಂತಿರುವ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಒಂದೇ ದಿನ ಕರು ಹಾಗೂ ಮೇಕೆ ಮೇಲೆ ದಾಳಿ ನಡೆಸಿರುವ ಚಿರತೆ ಅವುಗಳನ್ನು ಅರೆಬರೆ ತಿಂದಿದೆ.
ರೈತ ಲಕ್ಷ್ಮಿನಾರಾಯಣಪ್ಪ ಅವರು ಮೇಕೆ ಮೇಯಿಸಲು ಬೆಟ್ಟದ ತಪ್ಪಲಿಗೆ ತೆರಳಿದಾಗ ಸದ್ದಿಲ್ಲದೆ ₹6ಸಾವಿರ ಮೌಲ್ಯದ ಮೇಕೆ ಎಳೆದೊಯ್ದು ತಿಂದಿದೆ. ರಾಮಕೃಷ್ಣಪ್ಪ ಎಂಬುವರ ₹8ಸಾವಿರ ಮೌಲ್ಯದ ಸೀಮೆ ಕರು ಬಲಿ ಪಡೆದಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮೂರು ತಿಂಗಳುಗಳ ಹಿಂದೆ ಇದೇ ರೀತಿ ಘಟನೆ ನಡೆದಿತ್ತು. ಮತ್ತೆ ಈಗ ಒಂದೇ ದಿನ ಎರಡು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.