ದೇವನಹಳ್ಳಿ: ಗ್ರಾಮ ಪಂಚಾಯಿತಿ ನೌಕರರಿಗೆ 2018ರಿಂದ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಸಂಘದ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ 2018 ಮಾರ್ಚ್ನಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಂಚತಂತ್ರದಲ್ಲಿ ಸೇರಿಸಿ ಇ.ಎಫ್.ಎಂ.ಎಸ್ ಆಗಿರುವ ನೌಕರರಿಗೆ ಸರ್ಕಾರದ ನೇರ ನಿಧಿಯಿಂದ ಗ್ರಾಮ ಪಂಚಾಯಿತಿಗಳು ತನ್ನ ಸಂಪನ್ಮೂಲದಿಂದ ವೇತನ ಮತ್ತು ವಿ.ಡಿ.ಎಯನ್ನು ಕಡ್ಡಾಯವಾಗಿ ಪಾವತಿಸುವಂತೆ 2018 ಜೂನ್ 14ರಂದು ಸರ್ಕಾರ ಅದೇಶ ಹೊರಡಿಸಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತಿಯಾದ ನೌಕರನಿಗೆ ಒಂದು ವರ್ಷದ ಸೇವೆಗೆ 15 ದಿನದಂತೆ ಅವರ ಸೇವೆಗೆ ಅನುಗುಣವಾಗಿ 15 ತಿಂಗಳು ಮೀರದಂತೆ ಉಪ ಧನ ನೀಡಬೇಕು. ಇದರ ಬಗ್ಗೆ ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಿದ್ದರೂ ನೀಡಿಲ್ಲ. ಕೆಲವರು ನಿವೃತ್ತಿಯಾಗಿ ಹಲವು ವರ್ಷಗಳೇ ಕಳೆದಿವೆ. ಉಪಧನ ನೀಡಲು ಮೀನಾಮೇಷ ಎಣಿಸಲಾಗುತ್ತದೆ ಎಂದು ದೂರಿದರು.
ಸೇವಾ ನಿಯಮಾವಳಿ, ಪಿಂಚಣಿ, ವೈದ್ಯಕೀಯ ವೆಚ್ಚ, ಕಂಪ್ಯೂಟರ್ ಅಪರೇಟರ್ಗಳಿಗೆ ಬಡ್ತಿ, ನೌಕರರಿಗೆ ಸೇವಾ ಪುಸ್ತಕ ತೆರೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ8 ರಂದು ರಾಜ್ಯದಾಂದ್ಯತ ಗ್ರಾಮ ಪಂಚಾಯಿತಿ ಕಚೇರಿಗಳ ಮುಂದೆ ಅನಿರ್ದಿಷ್ಟಕಾಲ ಧರಣಿ ನಡೆಸುವುದಾಗಿ ತಿಳಿಸಿದರು.
ಮನವಿ ಸ್ವಿಕರಿಸಿ ಮಾತನಾಡಿದ ಇಒ ಗಿರಿಜಾ ಶಂಕರ್, ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕ ಕಾರ್ಯದರ್ಶಿ ತಿಮ್ಮೇಗೌಡ, ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರ ಶೇಖರ್, ನಿರ್ದೇಶಕರಾದ ಭೈರೇಗೌಡ, ಕೃಷ್ಣಪ್ಪ ಇದ್ದರು.