ಹೊಸಕೋಟೆ: ಕಾಲೇಜಿನ ಫಲಿತಾಂಶ ವಾರ್ಷಿಕೋತ್ಸವದ ಕಾರ್ಯಕ್ರಮದ ಮನರಂಜನೆಗಿಂತ ಹೆಚ್ಚಿನ ಸಂತೋಷ ತಂದಿದೆ ಎಂದು ವಸತಿ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.
ಅವರು ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು.
ಸರ್ಕಾರಿ ಕಾಲೇಜಿನಲ್ಲಿ ಶೇ 85 ಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಕಾಲೇಜಿನ ಡಿಜಿಟಲ್ ಲೈಬ್ರರಿಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹರ್ಷದಾಯಕ ಎಂದರು. ಮುಂದಿನ ವರ್ಷದಲ್ಲಿ ಕಾಲೇಜಿಗೆ ಸಭಾಂಗಣವನ್ನು ನಿರ್ಮಿಸುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮುನಿನಾರಾಯಣಪ್ಪ ಅವರು, ಈ ಕಾಲೇಜು ಉತ್ತಮ ಗುಣಮಟ್ಟದ ಅಧ್ಯಾಪಕರನ್ನು ಹೊಂದಿದೆ. ವಿದ್ಯಾರ್ಥಿಗಳ ಪೈಕಿ ಶೇ 60 ಹೆಣ್ಣು ಮಕ್ಕಳಿದ್ದಾರೆ. ಕಾಲೇಜಿನಲ್ಲಿ ಇರುವ ವಾತಾವರಣವು ಚೆನ್ನಾಗಿರುವುದನ್ನು ಇದು ಸೂಚಿಸುತ್ತದೆ ಎಂದರು.
ನ್ಯಾಕ್ ಸಂಸ್ಥೆ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಕಾಲೇಜಿಗೆ ಉತ್ತಮ ಸ್ಥಾನ ದೊರೆತಿದೆ. ಸಂಸ್ಥೆಗೆ ₹4 ಕೋಟಿ ಯನ್ನು ಸಹಾಯಧನ ಘೋಷಿಸಿದ್ದಾರೆ. ಅದರಿಂದ ಉನ್ನತ ಶಿಕ್ಷಣಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಒಳ್ಳೆಯ ವಿದ್ಯಾರ್ಥಿಗಳು ನಿರ್ಮಾಣವಾಗುವುದು ಒಳ್ಳೆಯ ಶಿಕ್ಷಕರಿಂದ. ಹೊಸಕೋಟೆಯ ಕಾಲೇಜಿನ ವಿದ್ಯಾರ್ಥಿಗಳ ಗುಣಮಟ್ಟ ನೋಡಿದರೆ ಇಲ್ಲಿನ ಶಿಕ್ಷಕರು ಹೇಗಿದ್ದಾರೆ ಎಂದು ತಿಳಿಯುತ್ತದೆ ಎಂದರು.
ಐಸೆಕ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಲಕ್ಷ್ಮಣ, ಗಾಯಕ ಮಸಾಲ ಮಂಜುನಾಥ್, ಕಿರು ತೆರೆಯ ಕಲಾವಿದ ರವಿ ಶಿಕಾರಿಪುರ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.