ವಿಜಯಪುರ: ಇಲ್ಲಿನ ಶಿಡ್ಲಘಟ್ಟ ರಸ್ತೆಯಲ್ಲಿರುವ ದಿವ್ಯ ಯೇಸುಬಾಲರ ದೇವಾಲಯದಲ್ಲಿ ಭಾನುವಾರ ವಾರ್ಷಿಕ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಿತು.
ಜಪಸರ, ಪಾಪನಿವೇದನೆ, ಧ್ವಜಾರೋಹಣ, ದಿವ್ಯಬಲಿಪೂಜೆ ಕಾರ್ಯಕ್ರಮವನ್ನು ಧರ್ಮಕೇಂದ್ರದ ಗುರು ಸ್ವಾಮಿ ಬಾಲರಾಜ್ ನಡೆಸಿಕೊಟ್ಟರು. ಮಧ್ಯಾಹ್ನ 3ಕ್ಕೆ ಆಡಂಬರ ಗಾಯನ ಬಲಿಪೂಜೆ ಆಯೋಜಿಸಲಾಗಿತ್ತು. ಸಂಜೆ 5ಕ್ಕೆ ಬಾಲಯೇಸು ಪುತ್ಥಳಿ ಮೆರವಣಿಗೆ ನಡೆಯಿತು.
ಚಂಡೆ ವಾದ್ಯಗಳೊಂದಿಗೆ ಕೆಂಪು ಮತ್ತು ಶ್ವೇತ ವಸ್ತ್ರದಾರಿಗಳಾಗಿದ್ದ ಮಕ್ಕಳು ಶಿಲುಬೆ ಹಿಡಿದು ಸಾಗಿದರು. ಭಕ್ತರು ಅವರನ್ನು ಹಿಂಬಾಲಿಸಿದರು.
ಧರ್ಮಗುರು ಸ್ವಾಮಿ ಚಾಕೋ ಮಾತನಾಡಿ, ಎಲ್ಲರು ಪ್ರೀತಿ –ವಿಶ್ವಾಸದಿಂದ ಬಾಳ್ವೆ ನಡೆಸಬೇಕಾಗಿದೆ. ಇದನ್ನು ಅರಿತರೆ ಬದುಕಿನಲ್ಲಿ ಸುಖವಿದೆ ಎಂದು ಹೇಳಿದರು.
ಧರ್ಮಗುರು ಮ್ಯಾಥ್ಯೂ ನ್ಯಾಯರ್ ಕುಳಂ ಮಾತನಾಡಿ, ಪ್ರತಿಯೊಬ್ಬರೂ ದೇವರ ಮಾರ್ಗದಲ್ಲಿ ಸಾಗಬೇಕಾಗಿದೆ. ಸ್ವಾರ್ಥ ಚಿಂತನೆ ಬಿಟ್ಟು ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.