ಸೂಲಿಬೆಲೆ: ‘ಹೋಬಳಿ ಕೇಂದ್ರವಾದ ಸೂಲಿಬೆಲೆ ಗ್ರಾಮಕ್ಕೆ, ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಶರತ್ ಬಚ್ಚೇಗೌಡ ಆಶ್ವಾಸನೆ ನೀಡಿದರು.
ಸೂಲಿಬೆಲೆ ಬಸ್ ನಿಲ್ದಾಣ ಬಳಿಯಿರುವ ಸರ್ಕಾರಿ ಮಾದರಿ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟ್ರಸ್ಟ್ ವತಿಯಿಂದ ನಡೆದ ಸೋಲಾರ್ ಕುಕ್ಕರ್ ಹಾಗೂ 600 ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೂಲಿಬೆಲೆ ಗ್ರಾಮದಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸುವ, ಕರ್ನಾಟಕ ಪಬ್ಲಿಕ್ ಶಾಲೆಯ ಬೇಡಿಕೆಯಿರುವ ಕಾರಣ ಸರ್ಕಾರಕ್ಕೆ ಶಿಫಾರಸು ಮಾಡಿ ಮಂಜೂರು ಮಾಡಿಸಿಕೊಡಲಾಗುವುದು. ಇದರಿಂದ ಈ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
‘ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಶಿಕ್ಷಕರಿಂದ ಸಾಧ್ಯವಿದ್ದು, ಶೈಕ್ಷಣಿಕ ಪರಿಸರ ನಿರ್ಮಿಸುವ ಕರ್ತವ್ಯ ಮುಖ್ಯ’ ಎಂದರು.
‘ಸ್ವಾತಂತ್ರ್ಯ ಹೋರಾಟಗಾರ ಸೂ.ರಂ.ರಾಮಯ್ಯ, ಸಂಸದ ಬಿ.ಎನ್.ಬಚ್ಚೇಗೌಡ ವಿದ್ಯಾಭ್ಯಾಸ ಮಾಡಿದ ಹಾಗೂ 110 ವರ್ಷಗಳನ್ನು ಪೂರೈಸಿದ ಶಾಲೆಯಾಗಿದ್ದು, ಶೈಕ್ಷಣಿಕವಾಗಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಕಡೆ ಸಾಗಬೇಕಾದರೆ ದಾನಿಗಳ ಸಹಕಾರ ಅಗತ್ಯ’ ಎಂದರು.
ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿದರು.
ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಸಮಾಜ ಸೇವಕ ರಮೇಶ್, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ರಾವ್, ಪದಾಧಿಕಾರಿಗಳಾದ ಸಂಜಯ್ ಮುಖಲ್, ಕಾಶೀನಾಥ್, ಮುಖ್ಯ ಶಿಕ್ಷಕಿ ಓಂಕಾರಮ್ಮ ಹಾಗೂ ಇತರರು ಇದ್ದರು.