ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಶ್ರೀನಿವಾಸಯ್ಯ ಮಾತನಾಡಿ, ರಾಮಾಯಣದ ಪಾತ್ರಗಳು ಸತ್ಯ, ಕರುಣೆ, ತ್ಯಾಗ, ಪ್ರೀತಿಯ ಪ್ರತೀಕಗಳಾಗಿವೆ ಎಂದರು.
ರಾಮಾಯಣದಲ್ಲಿನ ಬದುಕಿನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೂಲಕ ಜಗತ್ತಿಗೆ ಕೊಟ್ಟಿರುವ ಉನ್ನತ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಆಗ ವಾಲ್ಮೀಕಿ ಜಯಂತಿ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ವಿಶ್ವದ ಏಕತೆ ಹಾಗೂ ಸಮಗ್ರತೆಯನ್ನು ಬಲಗೊಳಿಸುವ ಅಂಶಗಳು ರಾಮಾಯಣದ ಕೃತಿಯಲ್ಲಿವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಬೇಕು ಎಂಬುದು ರಾಮನ ಆದರ್ಶ ರಾಜ್ಯದ ಪರಿಕಲ್ಪನೆಯಾಗಿತ್ತು ಎಂದು ಹೇಳಿದರು.
ಪ್ರಾಧ್ಯಾಪಕರಾದ ಸಿ. ರಾಮಚಂದ್ರ, ನರಸಿಂಹಮೂರ್ತಿ, ದಿನಕರ್, ಎಸ್. ರಾಜೇಶ್, ಸತೀಶ್, ಸಂಧ್ಯಾರಾಣಿ, ಶೈಲಾ, ಶ್ರೀನಿವಾಸ್ ಇದ್ದರು.
ಅರವಿಂದ ವಿದ್ಯಾಸಂಸ್ಥೆ: ನಗರದ ಶ್ರೀಅರವಿಂದ ವಿದ್ಯಾಸಂಸ್ಥೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎನ್. ಪ್ರಭುದೇವ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಬೇಡನಾಗಿದ್ದು ಮಹರ್ಷಿಯಾದರು. ಅವರ ಜೀವನ ಗಾಥೆ ಕೆಲ ಸಮುದಾಯದವರು ಮುಖ್ಯವಾಹಿನಿಗೆ ಬರಲು ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಡಿ.ಕೆ. ವೆಂಕಪ್ಪ, ಪ್ರಾಂಶುಪಾಲ ಎಂ.ಸಿ. ಮಂಜುನಾಥ್, ಮುಖ್ಯಶಿಕ್ಷಕಿ ಅಶ್ರಫ್ ಉನ್ನೀಸಾ, ಫರೀದಾ, ಸಿಬ್ಬಂದಿಯಾದ ಭಾಗ್ಯಮ್ಮ, ಸರ್ವಮಂಗಳಾ, ತುಳಸಿ, ಸುದರ್ಶನ್, ವಸಂತರಾಜು, ಹರೀಶ್, ರಾಮಮೂರ್ತಿ ಇದ್ದರು.