ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಪುರಾಣ ದೈವಗಳ ಸ್ಮರಣೆ

ತೂಬಗೆರೆ, ಕಲ್ಲುಕೋಟೆ ಗ್ರಾಮದಲ್ಲಿ ಐದು ನೂರು ವರ್ಷಗಳ ಇತಿಹಾಸದ ಭೂತನೆರಿಗೆ ಆಚರಣೆ
Last Updated 12 ಅಕ್ಟೋಬರ್ 2020, 8:23 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾನಪದ ದೈವಗಳಾದ ಕರಿಯಣ್ಣ-ಕೆಂಚಣ್ಣ ಪ್ರಧಾನವಾದ ಭೂತನೆರಿಗೆ ಜಾನಪದ ಪುರಾಣದ ನಂಬಿಕೆ ಆಧಾರದ ಮೇಲೆ ನಡೆಯುವ ವಿಜೃಂಭಣೆ ಹಬ್ಬ.

ಇಡೀ ತಾಲ್ಲೂಕಿನಲ್ಲೇ ತೂಬಗೆರೆ ಹಾಗೂ ಕಲ್ಲುಕೋಟೆ ಎರಡು ಗ್ರಾಮಗಳಲ್ಲಿ ಮಾತ್ರ ನಡೆಯುವ ಈ ವಿಶಿಷ್ಟ ಭೂತನೆರಿಗೆ ಹಬ್ಬದಲ್ಲಿ ಭೂತಗಳ ಅರ್ಭಟ ವೀಕ್ಷಣೆ ಮಾಡಲು ತಾಡಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಪ್ರತಿವರ್ಷ ಆಷಾಢ ಮಾಸದ ಏಕಾದಶಿ ಹಬ್ಬದ ದಿನದಂದು ಭೂತನೆರಿಗೆ ನಡೆಯಲಿದೆ.

ಪುರಾಣದ ಹಿನ್ನೆಲೆಯಲ್ಲಿ ವಿಷ್ಣುವಿನಿಂದ ಶಾಪಕ್ಕೆ ಒಳಗಾದ ಜಯ-ವಿಜಯರೇ ಕರಿಯಣ್ಣ-ಕೆಂಚಣ್ಣ. ವಿಷ್ಣುವಿನ ಶತ್ರುಗಳಾಗಿ ಭೂಲೋಕದಲ್ಲಿ ಜನ್ಮತಾಳುವ ಈ ಕರಿಯಣ್ಣ-ಕೆಂಚಣ್ಣರಿಗೆ ವಿಷ್ಣುವಿನ ಹೆಸರು ಮತ್ತು ಆತನ ನಾಮಸ್ಮರಣೆ ಮಾಡಿದರೆ ಸಹಿಸುವುದಿಲ್ಲ. ವಿಷ್ಣುವಿನಿಂದ ಶಾಪಕ್ಕೆ ಒಳಗಾದ ಕರಿಯಣ್ಣ-ಕೆಂಚಣ್ಣ ಇಂದಿಗೂ ಇದ್ದಾರೆ ಎಂಬುದು ಜಾನಪದರ ನಂಬಿಕೆ.

ಲಕ್ಷ್ಮಿನರಸಿಂಹಸ್ವಾಮಿ ಭಕ್ತರು ವಿಶೇಷವಾಗಿ ಈ ಭೂತನೆರಿಗೆ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ. ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಈ ಭೂತನೆರಿಗೆ ಹಬ್ಬ ಇಂದಿಗೂ ಸಹ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮದಲ್ಲಿ ನಡೆದು
ಕೊಂಡು ಬರುತ್ತಿದೆ.

ಕರಿಯಣ್ಣ-ಕೆಂಚಣ್ಣರ ಆರ್ಭಟ: ಭೂತನೆರಿಗೆ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಒಂದು ಕೈಯಲ್ಲಿ ಬೆಂಡಿನ ಮರದಲ್ಲಿ ಮನುಷ್ಯನ ಮುಖದ ಆಕೃತಿ ರೂಪಿಸಿ ಬಣ್ಣ ಹಾಕಿದ ವರ್ತುಲಾಕಾರದ ಹಲಗೆ ಹಿಡಿದಿರುತ್ತಾರೆ. ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿರುತ್ತಾರೆ. ಲಕ್ಷ್ಮಿನರಸಿಂಹಸ್ವಾಮಿ ಭಕ್ತರು ಕೆಂಚಣ್ಣ-ಕರಿಯಣ್ಣರ ಮುಂದೆ ವಿಷ್ಣುವಿನ ನಾಮಸ್ಮರಣೆ ಮತ್ತು ಗುಣಗಾನ ಮಾಡುತ್ತಾ ಇವರನ್ನು ಕೆಣಕುತ್ತಾರೆ. ವಿಷ್ಣುವಿನ ನಾಮಸ್ಮರಣೆ ಸಹಿಸದ ಈ ಕರಿಯಣ್ಣ ಮತ್ತು ಕೆಂಚಣ್ಣ ಭಕ್ತರ ಮೇಲೆ ಕೋಪಗೊಂಡು ಅವರೆಡೆಗೆ ನುಗ್ಗುತ್ತಾರೆ. ಕೋಪಗೊಂಡ ಕರಿಯಣ್ಣ ಕೆಂಚಣ್ಣರನ್ನು ಸಮಾಧಾನ ಮಾಡಲು ಇತರರು ಅವರ ಬಾಯಿಗೆ ಬಾಳೆ ಹಣ್ಣಿನ, ಹಲಸಿನ ಹಣ್ಣಿನಿಂದ ತಯಾರಿಸಿದ ರಸಾಯನವನ್ನು ತಿನ್ನಿಸುತ್ತಾರೆ. ಆವೇಶಕ್ಕೆ ಒಳಗಾದ ಈ ಭೂತಗಳು ಆ ಸಂದರ್ಭದಲ್ಲಿ ಏನು ಕೊಟ್ಟರೂ ತಿನ್ನುತ್ತಾರೆ ಎಂಬುದು ಜಾನಪದರ ನಂಬಿಕೆ. ಕೆಲವು ಗ್ರಾಮಗಳಲ್ಲಿ ನಡೆಯುವ ಈ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ಬಾಯಿಗೆ ಕುರಿ ಕೋಳಿಗಳನ್ನು ನೀಡುತ್ತಾರೆ. ಇವುಗಳ ರಕ್ತ ಹೀರುವುದರೊಂದಿಗೆ ಕರಿಯಣ್ಣ-ಕೆಂಚಣ್ಣ ಶಾಂತರಾಗುತಾರೆ ಎನ್ನುವುದು ಈ ಭಾಗದ ಭಕ್ತರ ನಂಬಿಕೆ.

ಹಲಸಿನ ಹಣ್ಣಿನ ರಸಾಯನ: ತಾಲ್ಲೂಕಿನ ತೂಬಗೆರೆ ಮತ್ತು ಕಾಚಹಳ್ಳಿ ಹಲಸು ರುಚಿ, ಬಣ್ಣದಲ್ಲಿ ನಾಡಿನಲ್ಲೇ ಹೆಸರು ಮಾಡಿದ್ದು ಭೌಗೋಳಿಕ ಮಾನ್ಯತೆ ಪಡೆದಿದೆ. ಹೀಗಾಗಿ ಈ ಭಾಗದಲ್ಲಿ ಮಾರ್ಚ್‌ ತಿಂಗಳಿಂದ ಮೊದಲುಗೊಂಡು ಜುಲೈ, ಆಗಸ್ಟ್‌ ತಿಂಗಳವರೆಗೂ ಯಾವುದೇ ದೇವಾಲಯದಲ್ಲಿ ಪೂಜೆಗಳು ನಡೆದರು ಭಕ್ತರಿಗೆ ಹಲಸಿನ ರಸಾಯನ ವಿತರಣೆ ಇದ್ದೇ ಇರುತ್ತದೆ. ಹಾಗೆಯೇ ಭೂತನೆರಿಗೆ ಸಂದರ್ಭದಲ್ಲೂ ಸಹ ಕೋಪಗೊಂಡಿರುವ ಕೆಂಚಣ್ಣ-ಕರಿಯಣ್ಣ ಅವರನ್ನು ಶಾಂತಗೊಳಿಸಲು ಹಲಸಿನ ಹಣ್ಣಿನಿಂದ ಸಿದ್ದಪಡಿಸಿದ ಬಕೆಟ್‌ಗಟ್ಟಲೇ ರಸಾಯನವನ್ನೇ ತಿನ್ನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT