ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು ಹೆಚ್ಚಿಸಿ ಆರ್ಥಿಕ ಚೈತನ್ಯ ಹೊಂದಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲ್ಲೂಕಿನ ಕುಂದಾಣ ಹೋಬಳಿ ವ್ಯಾಪ್ತಿಯ ಕನ್ನಮಂಗಲ, ಜಾಲಿಗೆ ಮತ್ತು ಕುಂದಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ರಸ್ತೆ ಮತ್ತು ಅಂಗನವಾಡಿಗಳ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
‘ನರೇಗಾ ಯೋಜನೆಗೆ ಅನುದಾನದ ಕೊರತೆ ಇಲ್ಲ. ಬಹುತೇಕ ಮುಂಗಾರು ಕೃಷಿ ಚಟುವಟಿಕೆ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಕೃಷಿ ಕೂಲಿ ಕಾರ್ಮಿಕರು ಮತ್ತು ರೈತರಿಗೆ ಇನ್ನು ಒಂದು ತಿಂಗಳಲ್ಲಿ ಸ್ಥಳೀಯ ಕೆಲಸಗಳು ಮುಗಿಯುತ್ತದೆ. ಪಂಚಾಯಿತಿ ಅಧಿಕಾರಿಗಳು ಈಗಿನಿಂದಲೇ ಉದ್ಯೋಗ ಕಾರ್ಡ್ ನೋಂದಾಯಿಸಿಕೊಂಡು ಉದ್ಯೋಗ ಕಾರ್ಡ್ ನೀಡಿ ಮುಂದಿನ ತಿಂಗಳಿನಿಂದ ಕೆಲಸ ಕೊಡಲು ಅನುಕೂಲವಾಗುತ್ತದೆ’ ಎಂದರು.
‘ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಸಾಮೂಹಿಕ ಶ್ರಮದಿಂದ ಚೆಕ್ ಡ್ಯಾಂ ನಿರ್ಮಾಣ, ಚರಂಡಿ ದುರಸ್ತಿ ,ಗೋಕಟ್ಟೆ ದುರಸ್ತಿ, ಅಶ್ವತ್ಥಕಟ್ಟೆ ನಿರ್ಮಾಣ, ಸಸಿ ನೆಡುವುದು, ನರೇಗಾ ಯೋಜನೆಯಡಿ ಬೇಕಾದಷ್ಟು ಕಾಮಗಾರಿಗಳಿಗೆ ಅವಕಾಶವಿದೆ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಬೇಕು’ ಎಂದು ಹೇಳಿದರು.
ಕುಂದಾಣ ಹೋಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ನಂತರ ದೊಡ್ಡ ಚೀಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಆದರ್ಶ ಗ್ರಾಮದ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ. ನಾಗರಾಜ್ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಮುರುಡಯ್ಯ, ಸಹಾಯಕ ಇಂಜಿನಿಯರ್ಗಳಾದ ಮಂಜುನಾಥ್, ಸೋಮಶೇಖರ್ ಇದ್ದರು.