ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆ ಮಾಡಿ, ಇಲ್ಲವೆ ಹೊರಡಿ’

ದೊಡ್ಡಬಳ್ಳಾಪುರ ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷರ ಮೇಲೆ ಆಕ್ರೋಶ
Last Updated 13 ನವೆಂಬರ್ 2020, 1:46 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಜಿಲ್ಲಾ ಘಟಕದ ಅಧ್ಯಕ್ಷ ಮುನೇಗೌಡರನ್ನು ನಂಬಿಕೊಂಡು ತಾಲ್ಲೂಕಿನಲ್ಲಿ ಜೆಡಿಎಸ್‌ ಪಕ್ಷ ಇಲ್ಲ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಪಕ್ಷ ಸಂಘಟಿಸಬೇಕು. ಇಲ್ಲವಾದರೆ ತಾಲ್ಲೂಕಿನಿಂದ ಹೊರಡಬೇಕು’ ಎಂದು ಜೆಡಿಎಸ್‌ ಮುಖಂಡ ಹರೀಶ್‌ಗೌಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನೇಗೌಡರು ಪಕ್ಷ ಸಂಘಟನೆ ಮಾಡುವ ಕಾರ್ಯಕರ್ತರಿಗಿಂತಲೂ ಮುನೇಗೌಡರ ಪರವಾಗಿ ಮಾತನಾಡುವ ವ್ಯಕ್ತಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ಹಿರಿಯ ರಾಜಕಾರಣಿ ಆರ್‌.ಎಲ್‌.ಜಾಲಪ್ಪ ಅವರನ್ನು ಎದುರು ಹಾಕಿಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟಿಸಿಕೊಂಡು ಬಂದಿರುವ ಅಪ್ಪಯ್ಯಣ್ಣ ಅವರ ವಿರುದ್ಧ ಭಿನ್ನಮತದ ಆರೋಪ ಮಾಡುತ್ತಿದ್ದಾರೆ. ಆದರೆ 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುನೇಗೌಡ ಅವರು ಕುಮಾರಸ್ವಾಮಿ ಅವರ ವಿರುದ್ಧ ‘ಹೆವಿ ಡೀಲಿಂಗ್‌ ಮಾಸ್ಟರ್‌’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಿಂದಾಗಿಯೇ ರಾಜ್ಯದಲ್ಲಿ ನಮ್ಮ ಪಕ್ಷ ಕಡಿಮೆ ಸ್ಥಾನಗಳಲ್ಲಿ ಜಯಗಳಿಸುವಂತಾಯಿತು. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರೇ ಮುನೇಗೌಡ’ ಎಂದು ದೂರಿದರು.

‘ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸ್ಥಾನದಿಂದ ಎಲ್ಲಾ ಅಧಿಕಾರಗಳು ಮುನೇಗೌಡರ ಕುಟುಂಬಕ್ಕೇ ನೀಡಿದರೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಯಾವ ಅಧಿಕಾರ ನೀಡಲು ಸಾಧ್ಯ’ ಎಂದು ಪ್ರಶ್ನಿಸಿದ ಅವರು, ‘ಜೆಡಿಎಸ್‌ ಪಕ್ಷಕ್ಕೆ ಕ್ಷೇತ್ರದಲ್ಲಿ ಮುನೇಗೌಡರಿಂದ ಆಗುತ್ತಿರುವ ತೊಂದರೆಗಳ ಕುರಿತಂತೆ ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಜೆಡಿಎಸ್‌ ಹಿರಿಯ ಮುಖಂಡ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಮುನೇಗೌಡರ ಪ್ರತಿಷ್ಠೆಯಿಂದಾಗಿ ಅಧಿಕಾರ ನಮ್ಮ ಪಕ್ಷದ ಕೈ ತಪ್ಪಲು ಕಾರಣವಾಗಿದೆ. ಪಕ್ಷದ ಎಲ್ಲಾ ಹಿರಿಯರು ಕಹಿ ಘಟನೆಗಳನ್ನು ಮರೆತು ಪಕ್ಷ ಸಂಘಟನೆಯಲ್ಲಿ ಎಲ್ಲರು ಒಟ್ಟಾಗಿ ಕೆಲಸಮಾಡಬೇಕು. ಮುಂದಿನ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ಮಾತನಾಡಿ, ‘ಹೊರಗಿನಿಂದ ನಮ್ಮ ತಾಲ್ಲೂಕಿಗೆ ಬಂದು ದರ್ಪ ತೋರಿಸುವುದನ್ನು ನಿಲ್ಲಿಸಬೇಕು. ಕ್ಷೇತ್ರದ ಜೆಡಿಎಸ್‌ ಪಕ್ಷದಲ್ಲಿ ಭಿನ್ನಮತ ಹುಟ್ಟು ಹಾಕಿದ್ದೇ ಮುನೇಗೌಡರು’ ಎಂದರು.

ಟಿಎಪಿಎಂಸಿಎಸ್‌ ನೂತನ ನಿರ್ದೇಶಕ ಟಿ.ವಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಆಯ್ಕೆಗೆ ಇಡೀ ತಾಲ್ಲೂಕಿನ ಎಲ್ಲಾ ಗ್ರಾಮದವರು ಮತ ಚಲಾವಣೆ ಮಾಡುವುದರಿಂದ ಗೊಂದಲವಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗುವುದು. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಲ್ಲಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳು ಅತ್ಯಂತ ಕಡಿಮೆ ಮತಗಳಿಂದ ಸೋತಿದ್ದಾರೆ. ಇದನ್ನು ಸೋಲು ಅನ್ನಲು ಸಾಧ್ಯವಿಲ್ಲ’ ಎಂದರು.

ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕ ಕೊನಘಟ್ಟ ಆನಂದ್‌ ಅವರನ್ನು ಅಭಿನಂದಿಸಲಾಯಿತು. ಮುಖಂಡ
ರಾದ ರಾ.ಬೈರೇಗೌಡ, ಅಶ್ವತ್ಥನಾರಾ
ಯಣ, ತಳವಾರ್‌ ನಾಗರಾಜ್‌, ರಂಗಪ್ಪ, ಚಂದ್ರಶೇಖರ್‌, ಕುಂಟನ
ಹಳ್ಳಿ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT