ವಿಜಯಪುರ: ಕೊರೊನಾ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳ ಬಗ್ಗೆ ಅಸಡ್ಡೆ ಮನೋಭಾವನೆ ತೋರಿಸದೆ ಅವರನ್ನು ಗೌರವಯುತವಾಗಿ ಕಾಣುವುದನ್ನು ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ಯಾಮ್ ಸುಂದರ್ ತಿಳಿಸಿದರು.
ಪಟ್ಟಣದ ಪ್ರಗತಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಕೋವಿಡ್- 19 ಸುರಕ್ಷತಾ ಕಾರ್ಯಕ್ರಮದ ಅರಿವು, ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್ ಕುಮಾರ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರ ಆದ್ಯ ಕರ್ತವ್ಯ. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಯುವಜನರು ಸಮಾಜಕ್ಕೆ ಈ ಮಾಹಿತಿ ರವಾನಿಸಬೇಕು ಎಂದರು.
ಕೊರೊನಾ ವಾರಿಯರ್ಸ್ಗಳಾದ ಕಾನ್ಸ್ಟೆಬಲ್ ಎನ್.ಎಂ. ರವಿಕುಮಾರ್, ವಿ.ಎನ್. ಸೂರ್ಯಪ್ರಕಾಶ್, ಜಿ. ಲಕ್ಷ್ಮೀದೇವಿ, ಎಸ್. ಕಲಾವತಿ ಅವರನ್ನು ಸನ್ಮಾನಿಸಲಾಯಿತು.
ನೆಹರೂ ಯುವ ಕೇಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಶ್ರೀವಾಣಿ ಕೋನರೆಡ್ಡಿ, ಪ್ರಗತಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ್ ಹಾಜರಿದ್ದರು.