ದೊಡ್ಡಬಳ್ಳಾಪುರ: ಡಿಸೆಂಬಂರ್ ನಂತರ ಇದೆ ಪ್ರಥಮ ಬಾರಿಗೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಬುಧವಾರ ಸಂಜೆ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪನೆಯ ವಾತಾವರಣ ಉಂಟಾಗಿದೆ.
ಸಂಜೆ 4 ಗಂಟೆಯಿಂದ ಆರಂಭವಾದ ಮಳೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬಿದ್ದಿದೆ. ಯುಗಾದಿ ಹಬ್ಬದ ನಂತರ ಸಾಮಾನ್ಯವಾಗಿ ಭರಣಿ ಮಳೆಯಿಂದಲೆ ಮುಂಗಾರು ಪೂರ್ವ ಮಳೆ ಆರಂಭವಾಗುತ್ತದೆ. ‘ಭರಣಿ ಮಳೆ ಬಿದ್ದರೆ ಧರಣಿಯಲ್ಲಾ ಬೆಳೆ’ ಎನ್ನುವ ಗಾದೆಯು ಇದೆ. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಭರಣಿ ಮಳೆ ಬಿದ್ದಿಲ್ಲ. ಈಗ ಅಶ್ವಿನಿ ಮಳೆ ಬಿದ್ದಿದೆ. ಹೀಗಾಗಿ ಈ ಬಾರಿ ಮಳೆ, ಬೆಳೆ ಅಷ್ಟಕ್ಕಷ್ಟೆ ಎನ್ನುತ್ತಾರೆ ಹಿರಿಯ ರೈತರು.
ಮುಂಗಾರು ಪೂರ್ವ ಮಳೆ ಬರುವಾಗ ಬಿರುಗಾಳಿ ಆರ್ಭಟ, ಮಳೆಯ ರಭಸ, ಗುಡು, ಸಿಡಿಲು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದರೆ ಬುಧವಾರ ಸಂಜೆ ಬಿರುಗಾಳಿ ಇಲ್ಲದೆ ಮಳೆ ಬಿದ್ದಿದೆ. ಹೀಗಾಗಿ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗಿರುವ ವರದಿಯಾಗಿಲ್ಲ.
ಗುಡುಗು ಸಹಿತ ಮಳೆ ಸೂಲಿಬೆಲೆ: ಹೋಬಳಿ ಮತ್ತುನಂದಗುಡಿ ಹೋಬಳಿಯ ಹಲವು ಕಡೆ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಬಿರುಸು ಮಳೆ ಸುರಿಯಿತು.
ಬೆಳಿಗ್ಗೆಯಿಂದಲೇ ಮೋಡಗಳು ಕಟ್ಟಿಕೊಂಡು ಜನರಲ್ಲಿ ಮಳೆಯ ಭರವಸೆಯನ್ನು ಮೂಡಿಸಿದ್ದವು. ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ಬುಧವಾರ ಸುರಿದಮಳೆ ಸ್ವಲ್ಪ ಮಟ್ಟಿಗೆ ತಂಪನ್ನು ನೀಡಿತು. ಸೂಲಿಬೆಲೆ ಹೋಬಳಿಯಮುತ್ಸಂದ್ರ ಸೇರಿದಂತೆ ಅನೇಕ ಕಡೆ ಹಾಗೂ ನಂದಗುಡಿಯ ಹೋಬಳಿಯಲ್ಲೂ ಗುಡುಗು ಸಹಿತ ಉತ್ತಮ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು.