ದೇವನಹಳ್ಳಿ:‘ರಾಮಾಯಣ ಜನಸಾಮಾನ್ಯರ ಜೀವನಕ್ಕೆ ಹತ್ತಿರವಾಗಿದೆ’ ಎಂದು ಚಿಕ್ಕಸಣ್ಣೆ ಗ್ರಾಮ ಪಂಚಾಯಿತಿ ಸದಸ್ಯ ಮುಕುಂದ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಸಣ್ಣೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ವಾಲ್ಮೀಕಿ ಬರೆದಿರುವ ರಾಮಾಯಣ ಮಹಾಕಾವ್ಯದಲ್ಲಿ ಪ್ರತಿಪಾದಿಸಿರುವ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾ ಕಾವ್ಯಗಳಲ್ಲಿನ ಆದರ್ಶ ಅಂಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಾಲ್ಮೀಕಿ ಜೀವನ ಸಂದೇಶವೇ ನಮಗೆ ಸ್ಫೂರ್ತಿದಾಯಕ. ರಾಮಾಯಣದಲ್ಲಿ ಕೌಟುಂಬಿಕ ಕ್ರೌರ್ಯ, ಆಡಳಿತದ ಪಾವಿತ್ರ್ಯ, ಸಹೋದರತ್ವ ಸೇರಿದಂತೆ ಇನ್ನೂ ಹಲವಾರು ಕಥೆಗಳು ಅಡಕವಾಗಿವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಮಾತನಾಡಿ, ಇಂದಿನ ಯುವಪೀಳಿಗೆಯು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಪಾಲಿಸಬೇಕು. ಅವರ ಬಗ್ಗೆ ಅಧ್ಯಯನ ಮಾಡಬೇಕು. ಪ್ರತಿಯೊಬ್ಬರಿಗೂ ತಮ್ಮ ತಪ್ಪು ತಿದ್ದಿಕೊಳ್ಳುವ ಅವಕಾಶ ನೀಡಬೇಕು. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹನುಮಯ್ಯ, ಮುಖಂಡರಾದ ಪಿಳ್ಳಯ್ಯ, ಶಾಂತಪ್ಪ, ಮುನಿಕೃಷ್ಣಪ್ಪ, ಮುನಿರಾಜು, ಲಘುಮಪ್ಪ, ಎಲ್. ಮುನಿರಾಜು, ನಾಗಪ್ಪ, ಹನುಮಂತ ಹಾಜರಿದ್ದರು.