ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಉತ್ತರ ಕರ್ನಾಟಕ ಭಾಗದ 9ನೇ ತರಗತಿಯ ಯುವತಿ ಮಾಡಿದ ಹೋರಾಟದ ಕಥಾ ಹಂದರ ಹೊಂದಿರುವ ‘ಸಂಡಾಸ್’ ಚಿತ್ರ ವಿಶ್ವದಾದ್ಯಂತ 102 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಚಿತ್ರದ ನಿರ್ದೇಶಕ ಡಾ.ದೇವನಹಳ್ಳಿ ದೇವರಾಜ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದಾಸಿ ಕುಟುಂಬದ ಹೆಣ್ಣು ಮಗಳು, ಬಯಲು ಬಹಿರ್ದೆಸೆ ಧಿಕ್ಕರಿಸಿ ಶೌಚಾಲಯಕ್ಕೆ ನಡೆಸಿದ ಪ್ರತಿಭಟನೆಗೆ ಮಾಧ್ಯಮ ಬೆಂಬಲದೊಂದಿಗೆ ಮಹತ್ವ ಪಡೆದುಕೊಳ್ಳುತ್ತದೆ. ಈ ಕುರಿತಾಗಿ ಸಿನಿಮಾ ನಿರ್ಮಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ರಂಗಭೂಮಿಯ 50 ಹೊಸ ಪ್ರತಿಭೆ ತರಬೇತಿ ನೀಡಿ, ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಸಿನಿಮಾ ನಿರೂಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಧಾರಾವಹಿಗಳು, ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಪರಿವರ್ತನಾ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ ಎಂದರು.
ಸಾಕಷ್ಟು ಹೇಳು, ಬೀಳುಗಳ ನಡುವೆ ಸಂಡಾಸ್ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಸಮಾಜ ಮುಖಿ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.