ಹೊಸಕೋಟೆ: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಮರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದಾರೆ.‘ಮುಸ್ಲಿಮರು ಬಿಜೆಪಿ ಕಚೇರಿ ಕಸ ಗುಡಿಸಲಿ. ನಮಗೆ ಅವರ ಮತಗಳು ಬೇಡ ಎಂದಿದ್ದಾರೆ’ ಸಮುದಾಯದ ಜನರು ಬಿಜೆಪಿಗೆ ಮತ ಹಾಕಬಾರದು ಎಂದು ಶಾಸಕ ಜಮೀರ್ ಅಹಮ್ಮದ್ ಸಲಹೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು 17ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅದರಲ್ಲಿ 15ಜನರನ್ನು ಬಿಜೆಪಿ ಸೇರಿಸಿಕೊಂಡಿದೆ. ಆದರೆ,ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಮೋಸ ಮಾಡಿದೆ ಎಂದರು.
ಎಂಟಿಬಿ ನಾಗರಾಜ್ ಕಾಂಗ್ರೆಸ್ನ ಅನೇಕರಿಗೆ ಹಣ ನೀಡಿದ್ದಾರೆ. ಅದಕ್ಕೆ ಬಡ್ಡಿ ವಸೂಲಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವ ಅವರು, ಮಂತ್ರಿಯಾಗಲು ಅಧಿಕಾರ ಅನುಭವಿಸಲು ಸಿದ್ದರಾಮಯ್ಯ ಅವರೇ ಕಾರಣರಾಗಿದ್ದಾರೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಶರತ್ ಬಚ್ಚೇಗೌಡ ಅವರಿಗೆ ಮತ ಹಾಕಿದರೆ ಮತ್ತೆ ಬಿಜೆಪಿಗೆ ಮತಹಾಕಿದಂತೆ. ಅವರು ಬಿಜೆಪಿ ಬಿ ಟೀಂ ಎಂದರು. ಪದ್ಮಾವತಿ ಸುರೇಶ್ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಕುಮಾರ್ ಹಾಗೂ ಇತರರು ಇದ್ದರು