ಆನೇಕಲ್ : ತಾಲ್ಲೂಕಿನ ಚಂದಾಪುರ ಸೂರ್ಯಸಿಟಿಯಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದಿಂದ ಸುಗ್ಗಿಹಬ್ಬ ಹಮ್ಮಿಕೊಳ್ಳಲಾಗಿತ್ತು.
ಸೂರ್ಯಸಿಟಿಯ ಪ್ರಮುಖ ಬೀದಿಗಳಲ್ಲಿ ರಾಸುಗಳ ಮೆರವಣಿಗೆ ನಡೆಸಲಾಯಿತು. ಗೋಪೂಜೆ ಮತ್ತು ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸುಗ್ಗಿ ಹಬ್ಬದ ಪ್ರಯುಕ್ತ ಗೋಪೂಜೆ, ರಾಶಿ ಪೂಜೆ, ಕೋಲಾಟ, ಭಜನೆ, ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆ ಮತ್ತು ಎತ್ತುಗಳ ಮೆರವಣಿಗೆ ನಡೆಯಿತು.
ಹಬ್ಬದಲ್ಲಿ ರೈತ ಮಹಿಳೆಯರು ರಂಗೋಲಿ ಮತ್ತು ಕೋಲಾಟದಲ್ಲಿ ಪಾಲ್ಗೊಂಡು ಕಣ್ಮನ ಸೆಳೆದರು. ಪರಸ್ಪರ ಎಳ್ಳುಬೆಲ್ಲ ಹಂಚುವ ಮೂಲಕ ಸಂಭ್ರಮಿಸಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಜಿ.ಮಂಜುನಾಥ ಮಾತನಾಡಿ, ಸುಗ್ಗಿ ಹಬ್ಬವು ರೈತರ ಮತ್ತು ರಾಸುಗಳ ಹಬ್ಬವಾಗಿದೆ. ಸಕಲ ಜೀವರಾಶಿಗಳಿಗೂ ಅನ್ನ ನೀಡುವ ಕೃಷಿಕ ಸಮಾಜವನ್ನು ಗೌರವಿಸಬೇಕಾದುದ್ದು ಸಮಾಜದ ಜವಾಬ್ದಾರಿಯಾಗಿದೆ. ಹಬ್ಬಗಳ ಆಚರಣೆಯು ಮುಂದಿನ ಪೀಳಿಗೆಗೆ ಸಂಸ್ಕೃತಿ ಮತ್ತು ಆಚರಣೆಯ ಮಹತ್ವವನ್ನು ತಿಳಿಸುತ್ತದೆ. ಕಿಸಾನ್ ಸಂಘದಿಂದ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಸುಗ್ಗಿ ಹಬ್ಬದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ರೈತಾಪಿ ವರ್ಗದ ಕೊಡುಗೆ ಅಪಾರ. ರೈತರು ಗುಣಮಟ್ಟದ ತರಕಾರಿ, ಹಣ್ಣು, ಧಾನ್ಯಗಳನ್ನು ಬೆಳೆಯುವ ಮೂಲಕ ಆರೋಗ್ಯಯುಕ್ತ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ರೈತರ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ರೈತ ದೇಶದ ಬೆನ್ನೆಲುಬು. ಭೂಮಿ ತಾಯಿ ಆಶೀರ್ವಾದದಿಂದ ಮಾನವ ಸಂಕುಲಕ್ಕೆ ಅನ್ನ ನೀಡುವ ಶಕ್ತಿ ಪಡೆದಿದ್ದಾನೆ. ಹೀಗಾಗಿ ಭೂಮಿ ತಾಯಿಗೆ ನಮನ ಸಲ್ಲಿಸಬೇಕಾದುದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ರಘುರೆಡ್ಡಿ, ಕಾರ್ಯದರ್ಶಿ ಕೆ.ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಸುಬ್ರಮಣಿ, ಸ್ವರೂಪ್, ನಿರ್ದೇಶಕರಾದ ಶಿವಕುಮಾರ್, ಅಶ್ವಿನ್, ವೆಂಕಟಸ್ವಾಮಿರೆಡ್ಡಿ, ವೆಂಕಟೇಶ್ ರೆಡ್ಡಿ, ರಮೇಶ್ ರೆಡ್ಡಿ, ನಾಗರಾಜು, ನಾರಾಯಣಗೌಡ, ಲಂಚಮುಕ್ತ ಸಮಾಜ ಸಂಘಟನೆಯ ಆರ್.ಮಹೇಶ್ ರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.