ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಗೊಂದಲ ಮೂಡಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ತಿಳಿಸಿದರು.
ಅವರು ಸೋಮವಾರ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಟಿಎಪಿಸಿಎಂಎಸ್ಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಐದು ಜನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದರು.
ಜೆಡಿಎಸ್ ಬೆಂಬಲದಿಂದ ಸ್ಪರ್ಧಿಸಿದ್ದವರ ಪೈಕಿ 4 ಜನ ಅತ್ಯಂತ ಕಡಿಮೆ ಅಂತರದ ಮತಗಳಿಂದ ಸೋಲು ಕಂಡಿದ್ದಾರೆ. ಶೇಕಡವಾರು ಮತಗಳಿಕೆ ಆಧಾರದ ಮೇಲೆ ಜೆಡಿಎಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ಬಂದಿವೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು 9 ಜನ ಅಭ್ಯರ್ಥಿಗಳೇ ಇಲ್ಲದೆ ಜೆಡಿಎಸ್ನ ಬಂಡಾಯ ಅಭ್ಯರ್ಥಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಹೀನಾಯ ಸ್ಥಿತಿಗೆ ತಲುಪಿದೆ. ಜನರಿಂದ ನೇರವಾಗಿ ಆಯ್ಕೆಯಾಗುವ 9 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರು ಮಾತ್ರ ಜಯಗಳಿಸಿದ್ದಾರೆ. ಶಾಸಕರು ಇದ್ದು ಕೂಡ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ. ತಾಲ್ಲೂಕಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕಡೆಗೆ ಒಲವು ತೋರಿದಿದ್ದಾರೆ ಎಂದರು.
ಟಿಎಪಿಸಿಎಂಎಸ್ ನೂತನ ನಿರ್ದೇಶಕ ಹಾಗೂ ಜೆಡಿಎಸ್ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ವಿ.ಆಂಜನೇಗೌಡ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವವರ ವಿರುದ್ಧ ಸೂಕ್ತಕ್ರಮ ಕೈಗೊಂಡು ಪಕ್ಷದಿಂದ ಹೊರ ಹಾಕುವಂತೆ ಹೈಕಮಾಂಡ್ಗೆ ಕಾನೂನು ಘಟಕದ ವತಿಯಿಂದಲೂ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು.
ಸ್ವಹಿತಾಸಕ್ತಿಗಾಗಿ ಒಳಸಂಚು ನಡೆಸಿ ಭಿನ್ನಮತ ಸೃಷ್ಟಿಸಿದವರಿಗೆ ಮತದಾರು ತಕ್ಷ ಪಾಠ ಕಲಿಸಿದ್ದಾರೆ. ಬಂಡಾಯ ಮುಖಂಡರೊಂದಿಗೆ ಹೋದಾಣಿಕೆ ಮಾಡಿಕೊಂಡ ಬಿಜೆಪಿ ಮುಖಂಡರು ಕೂಡ ತೀವ್ರ ಮುಖಭಂಗ ಅನುಭವಿಸಿದ್ದಾರೆ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದ್ದಾರೆ ಎಂದರು.
ನೂತನ ನಿರ್ದೇಶಕರಾದ ಕೆ.ಸಿ.ಲಕ್ಷ್ಮೀನಾರಾಯಣ, ವಿ.ಅಂಜನೇಗೌಡ, ಗೋವಿಂದರಾಜ್, ಚಂದ್ರಕಲಾ ಮಂಜುನಾಥ್, ಲಿಂಗನಹಳ್ಳಿ ಲಕ್ಷ್ಮೀನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ, ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟರಮಣಪ್ಪ, ಮುಖಂಡರಾದ ಶಿವಕುಮಾರ್, ರಮೇಶ್, ಅಖಿಲೇಶ್, ಕೂಗೋನಹಳ್ಳಿ ಸತೀಶ್, ರಾಮದಾಸ್, ಮುನಿರಾಜು, ನಾಗರಾಜ್, ಸಾಸಲು ಹೋಬಳಿ ಘಟಕದ ಅಧ್ಯಕ್ಷ ಸಿದ್ದಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.