ಹೊಸಕೋಟೆ: ರಂಗ ಕಲಾವಿದರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಪ್ರತಿ ತಾಲ್ಲೂಕಿಗೆ ಒಂದರಂತೆ ರಂಗಮಂದಿರ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಒತ್ತಾಯಿಸಿದರು.
ತಾಲ್ಲೂಕಿನ ಪೂಜೇನ ಅಗ್ರಹಾರ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿ ನಾಟಕ ಮಂಡಳಿಯಿಂದ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನಿಕತೆ ಪರಿಣಾಮದಿಂದ ರಂಗಭೂಮಿ ಅವನತಿ ಅಂಚಿನಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರ ಚಿತ್ತ ರಂಗಭೂಮಿಯತ್ತ ನಾಟಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಯುವಕರು ಮುಂದೆ ಬಂದು ನಾಟಕ ಪ್ರದರ್ಶನದಲ್ಲಿ ತೊಡಗುತ್ತಿದ್ದಾರೆ ಎಂದರು.
ತಾಲ್ಲೂಕು ಕಲಾವಿದರ ಸಂಘದ ನಿರ್ದೇಶಕ ನಟರಾಜ್ ಎಂಎನ್ಆರ್ ಮಾತನಾಡಿ, ತಾಲ್ಲೂಕಿನಲ್ಲಿ 2380ಕ್ಕೂ ಹೆಚ್ಚು ನೋಂದಾಯಿತ ಹವ್ಯಾಸಿ ಮತ್ತು ವೃತ್ತಿ ಕಲಾವಿದರಿದ್ದಾರೆ. 120ಕ್ಕೂ ಹೆಚ್ಚು ರಂಗಭೂಮಿ ನಾಟಕ ತಂಡಗಳು, 20 ನಿರ್ದೇಶಕರು ಹಾಗೂ 10 ಮಂದಿ ಮಹಿಳಾ ವೃತ್ತಿ ಕಲಾವಿದರು ಸೇರಿದಂತೆ 50ಕ್ಕೂ ಹೆಚ್ಚು ಸಂಗೀತ ನಿರ್ದೇಶಕರಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಒಂದೂ ಕೂಡ ರಂಗಮಂದಿರ ಇಲ್ಲವಾಗಿದೆ ಎಂದರು.
ಕರುಣೆ ಗೋಡೆ ರಾಜ್ಯ ಘಟಕದ ಅಧ್ಯಕ್ಷ ಚೇತನ್, ಹೋರಾಟಗಾರ ಗಿಡ್ಡಪ್ಪನಹಳ್ಳಿ ದೇವರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಟಿ.ಬಿ ಮುನಿರಾಜು, ಸದಸ್ಯರಾದ ರಮೇಶ್, ಗಗನ ಚಂದ್ರೇಗೌಡ, ಅನಿಲ್, ಆರ್ಯ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮುನೇಗೌಡ, ಕೋಡಿಹಳ್ಳಿ ಚಂದ್ರಪ್ಪ, ಮುನಿಯಲ್ಲಪ್ಪ ಸೇರಿದಂತೆ ಇತರರು ಇದ್ದರು.