ವಿಜಯಪುರ: ಕೊರೊನಾ ಸಂಕಷ್ಟದ ನಡುವೆಯೂ ಜನರು ಸಂಭ್ರಮ, ಉತ್ಸಾಹದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.
ಪ್ರತಿವರ್ಷ ಹಬ್ಬದ ಅಂಗವಾಗಿ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ, ಬಾಗಿನ ನೀಡುತ್ತಿದ್ದ ಮಹಿಳೆಯರು ಈ ಬಾರಿ ಕೊರೊನಾ ಭೀತಿಯಿಂದಾಗಿ ಸರಳವಾಗಿ ಮನೆಗಳಲ್ಲಿ ಆಚರಣೆ ಮಾಡಿಕೊಂಡಿದ್ದರು. ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿದ್ದರೂ ಖರೀದಿಯಲ್ಲಿ ಹಿಂದೆ ಬೀಳದೇ ಕುಟುಂಬಸ್ಥರೆಲ್ಲಾ ಕೂಡಿಕೊಂಡು ಹಬ್ಬ ಆಚರಣೆ ಮಾಡಿಕೊಂಡರು.
ಹಬ್ಬದ ಅಂಗವಾಗಿ ಲಕ್ಷ್ಮೀಯ ಪ್ರತಿರೂಪವನ್ನು ಪ್ರತಿಷ್ಠಾಪನೆ ಮಾಡಿ, ಸೀರೆ ಉಡಿಸಿ, ಹೂ, ಹಣ್ಣು, ಪೂಜಾ ಸಾಮಗ್ರಿಗಳನ್ನು ಇಟ್ಟು ಸಿಹಿ ತಿಂಡಿ ತಯಾರಿಸಿಟ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕೆಲವರು ದೇವರಿಗೆ ಬೆಳ್ಳಿಯ ಮುಖವಾಡ ಖರೀದಿಸಿದ್ದರು. ಮತ್ತೆ ಕೆಲವರು ರೆಡಿಮೇಡ್ ಲಕ್ಷ್ಮಿ ಉಡುಗೆಯನ್ನು ಖರೀದಿಸಿ ಇಟ್ಟಿದ್ದರು. ಆದರೆ, ಹಲವರು ಆರ್ಥಿಕ ಮುಗ್ಗಟ್ಟಿನಿಂದ ಇರುವುದರಲ್ಲೇ ತೀರಾ ಸರಳವಾಗಿ ಹಬ್ಬ ಆಚರಿಸುವ ಮೂಲಕ ತೃಪ್ತಿಪಟ್ಟುಕೊಂಡರು. ದೇವಾಲಯಗಳಲ್ಲಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ದಿನ ವಿಶೇಷ ಸೇವೆಗಳಿರಲಿಲ್ಲ. ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.