ಸ್ಥಳೀಯ ನಿವಾಸಿ ಅಶ್ವಥಪ್ಪ ಮಾತನಾಡಿ, ದಿಗ್ಬಂಧನ ಘೋಷಣೆಯಾಗುವುದಕ್ಕೂ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಬಹುತೇಕ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಕೆಲವೆಡೆ ಹಣ ಕೊಟ್ಟರೂ ತರಕಾರಿ, ಸೊಪ್ಪು ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರ ಲಾಠಿ ಏಟಿನ ಭಯದಿಂದಾಗಿ ಜನರು ದೂರದ ಮಾರುಕಟ್ಟೆಗಳಿಗೆ ಹೋಗಲಾಗದೆ ಸಮೀಪದ ಸಣ್ಣಪುಟ್ಟ ಅಂಗಡಿಗಳು ಹಾಗೂ ಮನೆ ಬಳಿ ಬರುವ ತಳ್ಳುಗಾಡಿ ವ್ಯಾಪಾರಿಗಳಿಗೆ ಹೆಚ್ಚಿನ ಹಣ ಕೊಟ್ಟು ಹಣ್ಣು, ತರಕಾರಿ, ಸೊಪ್ಪು ಖರೀದಿಸುತ್ತಿದ್ದಾರೆ. ಈ ಮಧ್ಯೆ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಖರೀದಿಗೆ ಅವಕಾಶ ನೀಡಿರುವುದರಿಂದ ಜನರು ಒಟ್ಟಾಗಿ ಖರೀದಿಗೆ ಮುಗಿ ಬೀಳುವುದರಿಂದ ವ್ಯಾಪಾರಸ್ಥರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತರಕಾರಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಬೆಲೆಗಳಲ್ಲಿ ಬೆಲೆ ಏರಿಕ ಲಾಭ ರೈತರಿಗೆ ಸಿಗುತ್ತಿಲ್ಲ. ಬದಲಿಗೆ ತರಕಾರಿ ಮಂಡಿ ಮಾಲೀಕರು, ವ್ಯಾಪಾರಿಗಳು, ದಲ್ಲಾಳಿಗಳು, ಮಧ್ಯವರ್ತಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.