ಹೊಸಕೋಟೆ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ರೀತಿಯ ಸವಲತ್ತುಗಳು ಸಿಗುವಹಾಗೆ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡರ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ ಹೇಳಿದರು.
ಅವರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯಲು ಬಿಸಿ ನೀರಿನ ಫಿಲ್ಟರ್ಗಳನ್ನು ನೀಡಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವಿಶೇಷವಾಗಿ ಕೋವಿಡ್ನಿಂದ ಬಳಲುವವರಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆಯಿಲ್ಲದೆ ರೋಗಿಗಳು ಸಮಸ್ಯೆ ಎದುರಿಸಬಾರದೆಂಬ ದೃಷ್ಟಿಯಿಂದ ಶಾಸಕ ಶರತ್ ಬಚ್ಚೇಗೌಡರು ತಾಲ್ಲೂಕಿನ ಆರು ಸರ್ಕಾರಿ ಆಸ್ಪತ್ರೆಗಳು ಮತ್ತು ಎರಡು ಕೋವಿಡ್ ಸೆಂಟರ್ಗಳಿಗೆ ಬಿಸಿ ನೀರಿನ ವಾಟರ್ ಫಿಲ್ಟರ್ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಶಾಸಕರು ರೂಪರೇಷೆಗಳನ್ನು ಸಿದ್ಧಪಡಿಸಿದ್ದು ಎಲ್ಲಾ ವಿಭಾಗಗಳನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸತೀಶ್,ತಾಲ್ಲೂಕು ಉಪ ವೈದ್ಯಾಧಿಕಾರಿ ಉಮೇಶ್, ನಗರ ಸಭಾ ಸದಸ್ಯರಾದ ರಾಕೇಶ್, ಗೌತಮ್, ಮುಖಂಡರಾದ ನಾಗರಾಜ್, ಬುಲ್ಪ್ ಮಂಜುನಾಥ್, ಇಮ್ತಿಯಾಜ್ ಪಾಷಾ, ರಮಾ ಮಂಜುನಾಥ್ ಇದ್ದರು.