ಹೊಸಕೋಟೆ: ‘ಗ್ರಾಮ ಪಂಚಾಯಿತಿಯಪ್ರತಿಯೊಬ್ಬ ಸದಸ್ಯರು ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದಾಗ, ಅಭಿವೃದ್ಧಿ ಸಾದ್ಯ’ ಎಂದು ಚೊಕ್ಕಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಮಹೇಶ್ ಅಭಿಪ್ರಾಯಪಟ್ಟರು.
ಚಿಕ್ಕಹುಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅನುದಾನದಲ್ಲಿ ₹ 3 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ವಿವಿಧ ಪಕ್ಷಗಳ ಬೆಂಬಲದಿಂದ ಆಯ್ಕೆಯಾಗಿದ್ದರೂ, ಗೆದ್ದ ನಂತರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ರಾಜಕೀಯ ಮರೆತು ಅಭಿವೃದ್ಧಿಗೆ ಕೈ ಜೋಡಿಸಿದರೆ ಗ್ರಾಮ ಪಂಚಾಯಿತಿಗೆ ಉತ್ತಮ ಹೆಸರು ಬರಲು ಸಾಧ್ಯ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜೆ. ಬಚ್ಚೇಗೌಡ ಮಾತನಾಡಿ, ‘ಹಲವು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ರಸ್ತೆ ಈಗ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರ ಅನುದಾನ ಸೇರಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎ. ಮಂಜುಳ ಶ್ರೀನಿವಾಸ್, ಗುತ್ತಿಗೆದಾರರಾದ ಚಂದ್ರಶೇಖರ್, ಲೆಕ್ಕ ಪರಿಶೋಧಕ ಗೋವಿಂದೇಗೌಡ, ಮುಖಂಡರಾದ ಸಯ್ಯದ್ ಅಹಮದ್, ತಿ.ರಮೇಶ್, ಪಿಳ್ಳೇಗೌಡ ಇದ್ದರು.