ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಯೊಬ್ಬರು ಗ್ರಾಹಕರ ಹಕ್ಕು ಅರಿಯಿರಿ: ವೈ.ಎಸ್. ತಮ್ಮಣ್ಣ

ಕನಕಪುರದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ
Published 15 ಮಾರ್ಚ್ 2024, 15:20 IST
Last Updated 15 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ಕನಕಪುರ: ಗ್ರಾಹಕರ ರಕ್ಷಣೆಗೆ ಗ್ರಾಹಕರ ಹಕ್ಕು ಮತ್ತು ನ್ಯಾಯಲಯವಿದೆ. ಕಾನೂನು ಮತ್ತು ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಾಗ ಮಾತ್ರ ತಮಗಾಗುವ ವಂಚನೆ ಮತ್ತು ಮೋಸದಿಂದ ಪರಾಗಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ವೈ.ಎಸ್. ತಮ್ಮಣ್ಣ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದರು.

ಗ್ರಾಹಕರಿಗೆ ಮೋಸ ಆಗದಂತೆ ನೋಡಿಕೊಳ್ಳಲು ಗ್ರಾಹಕರ ಹಕ್ಕು ರೂಪಿಸಲಾಗಿದೆ. ಮಳಿಗೆಗಳಲ್ಲಿ ವ್ಯವಹರಿಸುವಾಗ ಸಾರ್ವಜನಿಕರು ಎಚ್ಚರವಹಿಸಬೇಕು, ಕಡ್ಡಾಯವಾಗಿ ಬಿಲ್‌ ಪಡೆಯಬೇಕು, ತಾವು ಖರೀದಿಸಿರುವ ವಸ್ತುಗಳಲ್ಲಿ ಮೋಸವಾದಾಗ ಅದನ್ನು ಪ್ರಶ್ನಿಸಬೇಕು, ಭಯಪಡದೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿ ದೂರು ಕೊಡಬೇಕು. ಆಗ ಮಾತ್ರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.

ಆಯೋಗದ ಸದಸ್ಯೆ ರೇಣುಕಾದೇವಿ ದೇಶಪಾಂಡೆ ಮಾತನಾಡಿ, ಗ್ರಾಹಕರ ಕುಂದು ಕೊರತೆ, ಸಮಸ್ಯೆ ಎಲ್ಲಿ ಪರಿಹರಿಸಿಕೊಳ್ಳಬೇಕು ಎಂಬ ಅರಿವು ಸಾರ್ವಜನಿಕರಿಗೆ ಇರುವುದಿಲ್ಲ. ಅದರ ಬಗ್ಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಇಂದು ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೆಲವೊಂದು ಸಂದರ್ಭದಲ್ಲಿ ತಮ್ಮದಲ್ಲದ ತಪ್ಪಿಗೆ ನೋಟೀಸ್‌ ಬರುತ್ತವೆ. ವಿದ್ಯುತ್‌ ಇಲಾಖೆಯು ವಿದ್ಯುತ್‌ ಖಡಿತಗೊಳಿಸುತ್ತದೆ. ಕಾನೂನು ಉಲ್ಲಂಘಿಸಿ, ನೋಟಿಸ್‌ ನೀಡದೆ ವಿದ್ಯುತ್‌ ಕಡಿತಗೊಳಿಸಿದರೆ‌ ಇಲಾಖೆ ವಿರುದ್ಧ ಗ್ರಾಹಕ ನ್ಯಾಯಲಕ್ಕೆ ದೂರು ಸಲ್ಲಿಸಬಹುದು. ಗ್ರಾಹಕರ ನ್ಯಾಯಾಲಯದಲ್ಲಿ 60 ದಿನಗಳ ಒಳಗಾಗಿ ಪರಿಹಾರ ದೊರೆಯಲಿದೆ ತಿಳಿಸಿದರು.

ಆಯೋಗಕ್ಕೆ ಸರಿಯಾದ ದೂರುಗಳು ಸಲ್ಲಿಕೆಯಾಗುತ್ತಿಲ್ಲ. ಪ್ರತಿಯೊಬ್ಬರೂ ಸಹ ಗ್ರಾಹಕರ ಸುರಕ್ಷಿತ ಕಾನೂನು ಮತ್ತು ಹಕ್ಕುಗಳನ್ನು ತಿಳಿದುಕೊಂಡು ಸಮರ್ಪಕವಾದ ಸೇವೆ ಸಿಗದಿದ್ದರೆ, ಮೋಸ ಮತ್ತು ವಂಚನೆಗೊಳಗಾದವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ವಿಶ್ವಗ್ರಾಹಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗ್ರಾಹಕರು
ವಿಶ್ವಗ್ರಾಹಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗ್ರಾಹಕರು

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ರಮ್ಯ, ಕ್ರಿಯೇಟ್ ಸಂಸ್ಥೆ ಅಧ್ಯಕ್ಷ ಮುರುಳಿಧರನ್, ಜಿಲ್ಲಾ ಗ್ರಾಹಕರ ರಕ್ಷಣಾ ಪರಿಹಾರದ ಅಧ್ಯಕ್ಷ ಚಂದ್ರಯ್ಯ, ಸದಸ್ಯರಾದ ಕಲಾವತಿ ಬಾಯಿ, ಎಚ್.ಗೋವಿಂದಯ್ಯ, ಗೋಪಾಲಗೌಡ, ರೋಟರಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಸಿದ್ದರಾಜು, ಮಾಜಿ ಅಧ್ಯಕ್ಷ ಭಾನುಪ್ರಕಾಶ್, ಕಾನೂನು ಮಾಪಕ ಪರಿವೀಕ್ಷಕ ರಾಮಚಂದ್ರು, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ರಕ್ಷಣಾ ಪರಿಷತ್ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT