ದೇವನಹಳ್ಳಿ: ‘ನಿತ್ಯ ಜೀವನದಲ್ಲಿ ನೋವು, ನಲಿವಿನ ಎಲ್ಲಾ ಪರಿಸ್ಥಿತಿಯಲ್ಲಿಯೂ ಸಮಭಾವ ಹೊಂದಲು ಹಾಗೂ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ’ ಎಂದು ಸಹಜ ಯೋಗ ಗುರು ಜಯಲಕ್ಷ್ಮಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶನಿವಾರ ಸಹಜ ಯೋಗ ಸಂಸ್ಥೆ ಮತ್ತು ಬಿಕೆಎಸ್ ಪ್ರತಿಷ್ಠಾನದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಸಹಜ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗವು ಮನಸ್ಸಿನ ಚಂಚಲತೆ ನಿಗ್ರಹಿಸಿ, ಏಕಾಗ್ರತೆ ಹೆಚ್ಚಿಸಬಲ್ಲ ಮನೋ ವ್ಯಾಯಾಮವಾಗಿದೆ. ಶಾಂತಿ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವವು ಪ್ರತಿನಿತ್ಯ ಯೋಗಾಸನ ಮಾಡುವವರಲ್ಲಿ ಉಂಟಾಗುತ್ತದೆ ಎಂದು ತಿಳಿಸಿದರು.
ದೈಹಿಕವಾಗಿ ಹೃದಯಕ್ಕೆ ವಿಶ್ರಾಂತಿ ದೊರೆಯುವುದರ ಜೊತೆಗೆ ನರಮಂಡಲಕ್ಕೆ ಚೈತನ್ಯ ಶಕ್ತಿ ನೀಡುತ್ತದೆ. ಮಾನಸಿಕ ಉದ್ವೇಗ ದೂರಾಗಿ ರೋಗ ನಿರೋಧಕ ಶಕ್ತಿ ದ್ವಿಗುಣಗೊಳ್ಳಲು ಯೋಗವೊಂದೇ ಮಾರ್ಗ ಎಂದರು.
ಬಿಕೆಎಸ್ ಪ್ರತಿಷ್ಠಾನದ ಬಿ.ಕೆ. ಶಿವಪ್ಪ ಮಾತನಾಡಿ, ಯೋಗದಿಂದ ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿ ದ್ವೇಷ, ಜಾತಿ, ಮತ, ವಯೋಭೇದಗಳನ್ನು ನಿರ್ಮೂಲನೆ ಮಾಡಬಹುದಾಗಿದೆ. ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ಸ್ಥಳೀಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಹಜ ಯೋಗ ತರಬೇತುದಾರರಾದ ಅನು ನಾಗೇಂದ್ರ, ಲಾವಣ್ಯ, ಮುನಿಕೃಷ್ಣಪ್ಪ, ಶ್ರೀಕಲ್ಪವೃಕ್ಷ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಾರ್ಯದರ್ಶಿ ಸ್ವರ್ಣಾ ರಮೇಶ್, ಸಹ ಕಾರ್ಯದರ್ಶಿ ಗಾಯಿತ್ರಿ, ನಿರ್ದೇಶಕಿ ಅನಿತಾ ಇದ್ದರು.