ದೊಡ್ಡಬಳ್ಳಾಪುರ: `ತಾಲ್ಲೂಕಿನ ಕೃಷಿ ಕ್ಷೇತ್ರದ ಪ್ರಗತಿಯಲ್ಲಿ ಪಿಎಲ್ಡಿ ಬ್ಯಾಂಕ್ ಮುಖ್ಯಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ಎಲ್ಲಾ ಷೇರುದಾರರ ಸಹಕಾರ ಮುಖ್ಯ~ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಹೇಳಿದರು.
ಅವರು ನಗರದ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
`2010-11ನೇ ಸಾಲಿನಲ್ಲಿ 1.76 ಕೋಟಿ ರೂಗಳಷ್ಟು ಸಾಲ ವಿತರಣೆ ಮಾಡಲಾಗಿದೆ. 10 ಟ್ರಾಕ್ಟರ್ಗಳ ಖರೀದಿಗೆ ಸಾಲ, 50 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಕೃಷಿ ಕೈಗೊಳ್ಳುಲು ಸಾಲ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಲ ನೀಡಲಾಗಿದೆ. ಈ ವರ್ಷ ಬ್ಯಾಂಕಿನ ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಲಾಗಿದ್ದು, ಶೇ.60ರಷ್ಟು ವಸೂಲಾತಿಯಾಗಿದೆ. ಶೇ.3ರ ಬಡ್ಡಿ ದರ ಸೇರಿದಂತೆ ವಿವಿಧ ಯೋಜನೆಗಳಲ್ಲಿ ರೈತರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸುವ ಮೂಲಕ ಇತರೆ ರೈತರು ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಬೇಕು~ ಎಂದು ಹೇಳಿದರು.
ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಎಸ್.ಪಿ.ಮರಿಬಸಪ್ಪ, ನಿರ್ದೇಶಕರಾದ ಎನ್.ಹನುಮಂತೇಗೌಡ, ವೆಂಕಟೇಶ್ಬಾಬು ಮುಂತಾದವರು ಹಾಜರಿದ್ದರು.