ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಶಾಲೆಗಳಲ್ಲಿ ಪೌಷ್ಟಿಕ ಕೈತೋಟ ಸ್ಥಾಪನೆ ಮತ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ ಶಾಲಾಮಕ್ಕಳು ಮತ್ತು ಶಿಕ್ಷಕರಿಗೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಬಿ.ಜಿ. ವಾಸಂತಿ ಪೌಷ್ಟಿಕ ಕೈತೋಟ ಮಾಡಲು ಭೂಮಿ ಸಿದ್ಧತೆ, ತೇವಾಂಶ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ವಿಷಯ ತಜ್ಞರಾದ ಡಾ. ಬಿ. ಮಂಜುನಾಥ, ಕೈತೋಟದಲ್ಲಿ ಕಂಡು ಬರುವ ಸಾಮಾನ್ಯ ರೋಗಗಳು ಮತ್ತು ಕೀಟಗಳ ಬಗ್ಗೆ ತಿಳಿಸಿ, ಅವುಗಳ ಜೈವಿಕ ನಿರ್ವಹಣೆ ಬಗ್ಗೆ ತಿಳಿಸಿದರು.
ವಿಷಯ ತಜ್ಞರಾದ ಡಾ. ಎಸ್.ಎಂ. ಸವಿತಾ ಪೌಷ್ಟಿಕ ಕೈತೋಟ ಮಾಡುವುದರಿಂದ ಆಗುವ ದೈಹಿಕ ಮತ್ತು ಮಾನಸಿಕ ಅನುಕೂಲಗಳು ಮತ್ತು ಕೈತೋಟದಲ್ಲಿ ಬೆಳೆದಂತಹ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಮಕ್ಕಳ ಆರೋಗ್ಯದಲ್ಲಿ ಕಂಡುಬರುವ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು. ಪಶು ವಿಜ್ಞಾನ ವಿಭಾಗದ ಡಾ.ಆನಂದ ಮಣಿಗಾರ್ ಮಕ್ಕಳ ಬೆಳವಣಿಗೆಯಲ್ಲಿ ಹಾಲಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಕೇಂದ್ರದ ಕ್ಷೇತ್ರ ವ್ಯವಸ್ಥಾಪಕರಾದ ಎನ್. ಜಗದೀಶ್ ಮಕ್ಕಳಿಗೆ ಕೇಂದ್ರದ ವಿವಿಧ ಪ್ರಾತ್ಯಕ್ಷಿಕೆ ಘಟಕಗಳನ್ನು ತೋರಿಸಿ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ, ತಿರುಮಗೊಂಡನಹಳ್ಳಿ, ತೊಗರಿಘಟ್ಟ, ಶಿರವಾರ ಮತ್ತು ವಡ್ಡರಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.