ಸವದತ್ತಿ: ರೈತರು ಹಾಗೂ ವ್ಯಾಪಾರಸ್ಥರಿಗೆ ನೆರವಾಗುವ ಮೂಲಕ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರಮಿಕರಿಗೆ ಸೂರು ನಿರ್ಮಿಸಿದ್ದು ಸ್ವಾಗತಾರ್ಹ. ಇದಕ್ಕಾಗಿ ಶ್ರಮಿಸಿದ ಮಾಜಿ ಶಾಸಕ ರಾಜಣ್ಣ ಅಭಿನಂದನಾರ್ಹರಾಗಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆಯ ಸಮಗ್ರ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿದ 145 ಮನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡುವುದು ರಾಜ್ಯ ಸರ್ಕಾರದ ಕನಸಾಗಿದೆ. ಪ್ರಮಾಣಿಕ ಕರ್ತವ್ಯಕ್ಕೆ ಸರ್ಕಾರ ಕೊಡುತ್ತಿರುವ ಕೊಡುಗೆ ಇದಾಗಿದೆ ಎಂದು ಅವರು ಬಣ್ಣಿಸಿದರು.
ವಿಶ್ವನಾಥನಗರದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ತೋರಬೇಕು. ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕ ಆನಂದ ಮಾಮನಿ ಮಾತನಾಡಿ, ಈ ಕಾಲೋನಿಗೆ ಅಗತ್ಯ ಮೂಲಸೌಕರ್ಯ ಒದಗಿಸ ಲಾಗುವುದು. ಅಲ್ಲದೇ ಪ್ರತಿ ಮನೆಯ ಎದುರು ಮರ ಬೆಳೆಸಲು ಸಸಿಗಳನ್ನು ಪೂರೈಸಲಾಗುವುದು. ಇಲ್ಲಿಯ ಸಮುದಾಯ ಭವನ ಹಾಗೂ ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಶಾಲೆ ಮಂಜೂರು ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮೂರು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮನೆಗಳ ನಿರ್ಮಾಣಕ್ಕೆ ಪ್ರತಿಯೊಬ್ಬರು 16 ಸಾವಿರ ರೂಪಾಯಿ ಮಾತ್ರ ಭರಿಸಿದ್ದಾರೆ. ಅವರಿಗೆಲ್ಲ ರೂ, 2 ಲಕ್ಷ ವೆಚ್ಚದ ಸಕಲ ವ್ಯವಸ್ಥೆಗಳೂಳ್ಳ ಮನೆ ನಿರ್ಮಿಸಿ ಕೊಡಲಾಗಿದೆ. ಸದ್ಯ ನೀರು, ರಸ್ತೆ, ಶಾಲಾ ಕಟ್ಟಡ, ಸಮುದಾಯ ಭವನದ ಅಗತ್ಯವಿದೆ ಎಂದು ಮಾಜಿ ಶಾಸಕ ರಾಜಣ್ಣ ಮಾಮನಿ ಹೇಳಿದರು.
ಶಿವಬಸವ ಸ್ವಾಮಿಗಳು, ಮುರುಘೇಂದ್ರ ಸ್ವಾಮಿಗಳು, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪುರದಗುಡಿ, ವಿ.ವಿ. ಕೆರೂರ, ಎಸ್.ಎಸ್. ಪಾಟೀಲಪದಕಿ, ಸುನೀಲ ಸುಳ್ಳದ, ಸಿದ್ಧಪ್ಪ ಉಳ್ಳಿಗೇರಿ, ಗುರಪ್ಪ ಚಿಕ್ಕುಂಬಿ, ಅರವಿಂದ ಪಾಟೀಲ, ಡಾ. ಮನೋಹರ ಮಾಮನಿ ಉಪಸ್ಥಿತರಿದ್ದರು.