ಬೆಳಗಾವಿ: ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿರ್ದೇಶನದಂತೆ ಇಲ್ಲಿನ ಟಿಳಕವಾಡಿಯಲ್ಲಿರುವ 2ನೇ ರೈಲ್ವೆ ಗೇಟ್ ಬಳಿ ಚಿಕ್ಕದಾಗಿದ್ದ ರಸ್ತೆಯನ್ನು ಅಗಲು ಮಾಡಿ, ವಾಹನಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ.
ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ರೈಲ್ವೆ ಹಳಿ ಬಳಿ ರಸ್ತೆ ಚಿಕ್ಕದಾಗಿದ್ದರಿಂದ ವಾಹನಗಳು ಹಳಿ ದಾಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದವು. ಇದರಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಇದರ ಬಗ್ಗೆ ಸುರೇಶ ಅಂಗಡಿ ಅವರಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು.
ತಕ್ಷಣ ಸ್ಪಂದಿಸಿದ ಅಂಗಡಿ ಅವರು, ಕೂಡಲೇ ರಸ್ತೆ ವಿಸ್ತರಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರ ಪ್ರಕಾರ, 6.8 ಮೀಟರ್ ಅಗಲವಿದ್ದ ರಸ್ತೆಯನ್ನು 10.0 ಮೀಟರ್ವರೆಗೆ ವಿಸ್ತರಣೆ ಮಾಡಿದ್ದಾರೆ. ಇತ್ತೀಚೆಗೆ 4ನೇ ರೈಲ್ವೆ ಗೇಟ್ ಬಳಿಯೂ ರಸ್ತೆ ವಿಸ್ತರಣೆ ಮಾಡಲಾಗಿತ್ತು.