ಬೆಳಗಾವಿ: ‘ಶರಣರು ನಡೆದು, ನುಡಿದು ತೋರಿದ ಜೀವನ ದರ್ಶನ ಅಪೂರ್ವವಾದುದು. ದರ್ಶನವೆಂದರೆ ಹೊರಗೆ ತೋರುವ ಜ್ಞಾನವಲ್ಲ. ಅದು ಅಂತರಂಗದ ದಿವ್ಯರೂಪ’ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಧಾರವಾಡ ಹೇಳಿದರು.
ಇಲ್ಲಿನ ಲಿಂಗಾಯತ ಭವನದಲ್ಲಿ ವೀರಶೈವ ಮಹಾಸಭಾ ಗುರುವಾರ ಆಯೋಜಿಸಿದ್ದ ‘ಅನುಭಾವ ಗೋಷ್ಠಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ ನುಡಿಗಳು ಒಂದೇ ಆಗಿರಬೇಕು. ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನವನ್ನು ಅಂತರಂಗದಲ್ಲಿ ಅಳವಡಿಸಿಕೊಂಡರು. ತಮ್ಮ ನಡೆಯಲ್ಲಿ ಅನುಷ್ಠಾನಗೊಳಿಸಿದರು. ಸಮಾಜದಲ್ಲಿ ಸಮಾನತೆ ತರುವ ಮೂಲಕ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸಿದರು. ಆ ಸಮಾಜಮುಖಿ ದರ್ಶನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದರು.
‘ಇಂದು ನಾವು ನಮ್ಮತನಗಳನ್ನು ಕಳೆದುಕೊಂಡು ಬದುಕುತ್ತಿರುವುದು ವಿಪರ್ಯಾಸ. ಆತ್ಮಮುಖಿ ಚಿಂತನೆ ಮಾತ್ರ ನಮ್ಮ ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ವಚನಗಳನ್ನು ಓದುವ ಮೂಲಕ ಶರಣರ ಆತ್ಮದರ್ಶನಕ್ಕೆ ಯತ್ನಿಸಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಎಲ್ಲ ಧರ್ಮಗಳೂ ನಾವೆಲ್ಲರೂ ಒಗ್ಗೂಡಿ ಬಾಳಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸುತ್ತವೆ. ಸೌಹಾರ್ದವೆ ಮಾನವ ಧರ್ಮ; ಅಸಹನೆಯೇ ಅಧರ್ಮ ಎನ್ನುವುದನ್ನು ಅರಿತು ಬಾಳಿದರೆ ಶರಣರ ಆಶೀರ್ವಾದ ದೊರೆಯುತ್ತದೆ’ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಶರಣರು ನೀಡಿರುವ ಸಂದೇಶಗಳು ವಿಶ್ವಸತ್ಯಗಳಾಗಿವೆ. ಅವುಗಳನ್ನು ಅನುಕರಣೆಗೆ ತರುವುದೇ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ’ ಎಂದು ಹೇಳಿದರು.
ಇಂದಿರಾ ಮೋಟೆ ಬೆನ್ನೂರ ಪ್ರಾರ್ಥಿಸಿದರು. ಸುಧಾ ಪಾಟೀಲ ವಚನ ವಿಶ್ಲೇಷಣೆ ಮಾಡಿದರು. ಸುಜಾತಾ ವಸ್ತ್ರದ ಭಕ್ತಿಗೀತೆ ನುಡಿಸಿದರು. ಆರ್.ಪಿ. ಪಾಟೀಲ ಸ್ವಾಗತಿಸಿದರು. ಸೋಮಲಿಂಗ ಮಾವಿನಕಟ್ಟಿ ಪರಿಚಯಿಸಿದರು. ಆಶಾ ಯಮಕನಮರಡಿ ವಂದಿಸಿದರು.