ಬೆಳಗಾವಿ: ‘ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ನೈತಿಕ ಮತದಾನವೇ ಪ್ರಮುಖ ಅಸ್ತ್ರವಾಗಿದೆ’ ಎಂದು ಜಿಲ್ಲಾ ಸ್ಟೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸ್ಟೀಪ್ ಸಮಿತಿ ಸಹಯೋಗದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾವನ್ನು ಕೋಟೆ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
‘18 ವರ್ಷ ಪೂರ್ಣಗೊಂಡವರು ಮತದಾನ ಮಾಡುವ ಹಕ್ಕು ಹೊಂದಿರುತ್ತಾರೆ. ಮತದಾನ ಮಾಡಬೇಕಾದರೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದೆ. ಆದ್ದರಿಂದ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸೀಬಿರಂಗಯ್ಯ, ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಶಿಕ್ಷಣ ಅಧಿಕಾರಿ ಬಿ.ಎಚ್. ಮಿಲ್ಲಾನಟ್ಟಿ, ಬಿಮ್ಸ್ ನಿರ್ದೇಶಕ ಡಾ.ಎಸ್.ಟಿ. ಕಳಸದ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಾಮದೇವ ಮಾಳಗಿ ಇದ್ದರು.
ಎಂಬಿಬಿಎಸ್ ಪದವಿ ಹಾಗೂ ಸ್ನಾತಕೋತ್ತರ, ಬಿಎಸ್ಸಿ ನರ್ಸಿಂಗ್, ಜನರಲ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಕೋಟೆ ಆವರಣದಿಂದ ಕೇಂದ್ರ ಬಸ್ ನಿಲ್ದಾಣ, ಖಡೇಬಜಾರ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬೋಗಾರವೇಸ್ ಮಾರ್ಗವಾಗಿ ವನಿತಾ ವಿದ್ಯಾಲಯ ಶಾಲೆ ಆವರಣದವರೆಗೆ ಜಾಥಾ ನಡೆಸಿದರು.
ಗ್ರಾಮ ಮಟ್ಟದ ಸ್ವೀಪ್ ಸಮಿತಿಯಿಂದ ತಾಲ್ಲೂಕಿನ ಸುಳೇಭಾವಿ, ಕಂಗ್ರಾಳಿ ಬಿ.ಕೆ. ಗ್ರಾಮ, ಅಗಸಗಾದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಶಾಲಾ ಮಕ್ಕಳು, ಗ್ರಾಮ ಪಂಚಾಯ್ತಿಯವರು ಭಾಗವಹಿಸಿದ್ದರು.