ಬನದ ಹುಣ್ಣಿಮೆ ಅಂಗವಾಗಿ ಸವದತ್ತಿಗೆ ಭಕ್ತರು ದಂಡು ದಂಡಾಗಿ ಬರುತ್ತಿದ್ದಾರೆ. ಹೀಗಾಗಿ, ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಾದ ಚುಳಕಿ, ಹಿರೇಕುಂಬಿ, ಉಗರಗೋಳ ಗ್ರಾಮಗಳ ಮುಖ್ಯ ರಸ್ತೆಗಳಲ್ಲೆ ಬ್ಯಾರಿಕೇಡ್ ಅಳವಡಿಸಿ ಭಕ್ತರು ಗುಡ್ಡಕ್ಕೆ ತೆರಳದಂತೆ ಪೊಲೀಸರು ತಡೆಯುತ್ತಿದ್ದಾರೆ. ಆದ್ದರಿಂದ ಭಕ್ತರು ದೂರದಲ್ಲೇ ಒಲೆ ಹೂಡಿ ದೇವಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ. ಗ್ರಾಮದ ಪಕ್ಕದ ಕೃಷಿ ಜಮೀನುಗಳಲ್ಲಿ ಧಾರ್ಮಿಕ ಕಾರ್ಯ ಕೈಗೊಂಡು, ಭಕ್ತಿ ಸಮರ್ಪಿಸುತ್ತಿದ್ದಾರೆ. ಗ್ರಾಮಗಳಲ್ಲೀಗ ಜಾತ್ರಾ ಸಂಭ್ರಮ ಮನೆ ಮಾಡಿದ್ದು, ಅಲ್ಲಿ ಭಂಡಾರದ ಘಮಲು ಪಸರಿಸಿದೆ.