ಬೆಳಗಾವಿ: ನಗರದಲ್ಲಿ ಜಲಾವೃತವಾಗಿರುವ ವಿವಿಧ ಸ್ಥಳಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಹಳೇ ಪಿ.ಬಿ,ರಸ್ತೆ, ಯಡಿಯೂರಪ್ಪ ಮಾರ್ಗ, ಧಾಮನೆ ರಸ್ತೆ, ಕಪಿಲೇಶ್ವರ ಕಾಲೊನಿ, ಶಿವಾಜಿ ಗಾರ್ಡನ್, ನಾಥ ಪೈ ವೃತ್ತ, ಕಾಂಗ್ರೆಸ್ ರಸ್ತೆ ಹಾಗೂ ಗಾಂಧಿ ನಗರದಲ್ಲಿ ಸಂಚರಿಸಿ ಮಳೆಯಿಂದಾಗಿರುವ ಹಾನಿಯನ್ನು ವೀಕ್ಷಿಸಿದರು. ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು.
‘ಧೈರ್ಯಗೆಡಬೇಡಿ, ಎಲ್ಲ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು’ ಎಂದು ಸಿಎಂ ಸಂತ್ರಸ್ಥರಿಗೆ ಧೈರ್ಯ ಹೇಳಿದರು. ‘ಅಗತ್ಯ ನೆರವು ಕಲ್ಪಿಸಿ, ಯಾವುದೇ ಕಾರಣಕ್ಕೂ ವಿಳಂಭ ಮಾಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಮಳೆಗಾಲದಲ್ಲಿ ಬಳ್ಳಾರಿ ನಾಲೆ ಹಾಗೂ ಮಾರ್ಕಂಡೇಯ ನದಿಯಿಂದ ಉಂಟಾಗುತ್ತಿರುವ ಪ್ರವಾಹವನ್ನು ತಪ್ಪಿಸಲು ಶಾಶ್ವತ ಪರಿಹಾರ ಕೈಗೊಳ್ಳುವಂತೆ’ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಆಗ್ರಹಿಸಿದರು. ಕ್ರಮಕೈಗೊಳ್ಳುವ ಭರವಸೆಯನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಅನಿಲ ಬೆನಕೆ ಇದ್ದರು.