ಬೆಳಗಾವಿ: ಈ ಬಾರಿಯ ಮೇಯರ್ ಸ್ಥಾನವನ್ನು ಕನ್ನಡಿಗರಿಗೆ, ಉಪಮೇಯರ್ ಸ್ಥಾನವನ್ನು ಮರಾಠಿಗರಿಗೆ ನೀಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯಲ್ಲಿ ಕನ್ನಡ ಹಾಗೂ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ತಂತ್ರ ಹೆಣೆದಿದೆ ಎನ್ನಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮೇಯರ್– ಉಪಮೇಯರ್ ಚುನಾವಣೆ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ. ಆಡಳಿತಾರೂಢ ಬಿಜೆಪಿಯ 17ನೇ ವಾರ್ಡ್ ಸದಸ್ಯೆ ಸವಿತಾ ಕಾಂಬಳೆ ಹಾಗೂ 35ನೇ ವಾರ್ಡ್ ಸದಸ್ಯೆ ಲಕ್ಷ್ಮಿ ರಾಠೋಡ ನಾಮಪತ್ರ ಸಲ್ಲಿಸಿದ್ದಾರೆ.
ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ 44ನೇ ವಾರ್ಡ್ ಸದಸ್ಯ ಆನಂದ ಚೌಹ್ವಾನ್ ಹಾಗೂ 54ನೇ ವಾರ್ಡ್ ಸದಸ್ಯ ಮಹಾದೇವಿ ರಾಗೋಚೆ ನಾಮಪತ್ರ ಸಲ್ಲಿಸಿದ್ದಾರೆ.
ಮೇಯರ್ ಮೀಸಲಾತಿಯ ಕಾರಣ ವಿರೋಧ ಪಕ್ಷವಾದ ಕಾಂಗ್ರೆಸ್ನಿಂದ ಯಾರೂ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಮೇಯರ್ ಹುದ್ದೆ ಅವಿರೋಧವಾಗಿ ನಡೆಯುವ ಸಾಧ್ಯತೆ ಇದೆ.
ಉಪಮೇಯರ್ ಹುದ್ದೆ ಸಾಮಾನ್ಯವಾದ್ದರಿಂದ ಕಾಂಗ್ರೆಸ್ನಿಂದ ಶಹಮುದ್ದಿನ್ ಪಠಾಣ್ ಹಾಗೂ ಜ್ಯೋತಿ ಕಡೋಲ್ಕರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವಿರೋಧ ಆಯ್ಕೆ ತಪ್ಪಿಸುವ ಉದ್ದೇಶದಿಂದ ಈ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.