ಮುಗಳಖೋಡ (ಬೆಳಗಾವಿ ಜಿಲ್ಲೆ): ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ನೆರೆಯಿಂದ ಹಾನಿಗೀಡಾದ ಕುಡಚಿ ಗ್ರಾಮೀಣ, ಖೇಮಲಾಪೂರ, ದಿಗ್ಗೇವಾಡಿ, ಗುಂಡವಾಡ, ಶಿರಗೂರ, ಚಿಕ್ಕೂಡ, ಹಾಲಶಿರಗೂರ ಗ್ರಾಮಗಳಿಗೆ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ ಭೇಟಿ ನೀಡಿ ವೀಕ್ಷಿಸಿದರು.
ನಂತರ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಸುರಿದ ಮಹಾಮಳೆಗೆ ಕೃಷ್ಣಾ ನದಿ ಪಾತ್ರದ ಹಲವು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಸಾಕಷ್ಟು ಜನರ ಮನೆಗಳು, ಹೊಲಗಳು ಮುಳುಡೆಯಾಗಿ ತುಂಬಾ ಹಾನಿ ಸಂಭವಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹಲವು ಶಾಲೆಗಳಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳಲ್ಲಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದರು.
ಕುಡಚಿ ಮಂಡಲದ ಪ್ರಧಾನ ಕಾರ್ಯದರ್ಶಿ ಮಲಗೌಡ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹಾಲಳ್ಳಿ, ಯುವ ಮೋರ್ಚಾ ಪದಾಧಿಕಾರಿಗಳಾದ ರಾಮಗೌಡ ಪಾಟೀಲ, ಚೇತನ್ ಬಿಜ್ಜರಗಿ, ಶೇಖರ ಪಾಟೀಲ, ಸಂದಿಪ ಬನಜವಾಡ ಇದ್ದರು.