ಬೆಳಗಾವಿ: ವ್ಯಕ್ತಿಯ ಮಿದುಳಿನಲ್ಲಿ ಬೆಳೆದಿದ್ದ ಚಿಕ್ಕ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ನಗರದ ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿದೆ.
‘ಮೆದುಳಿನ ಕವಚ ತೆರೆಯದೆ ಅತ್ಯಾಧುನಿಕ ತಂತ್ರಜ್ಞಾನ ಎಚ್ಆರ್ಎಸ್ ನ್ಯುರೊ ನೆವಿಗೇಶನ್ ಮೂಲಕ ಸಣ್ಣದಾದ ರಂದ್ರ ಕೊರೆದು ಬಯಾಪ್ಸಿ ತಪಾಸಣೆ ವಿಧಾನ ಬಳಸಿ ಹಾಗೂ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನೆರವೇರಿಸಿ 50 ವರ್ಷದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ನರ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರ ತಂಡ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ವ್ಯಕ್ತಿಯು ತೀವ್ರ ತಲೆ ನೋವು, ಮಾತನಾಡಲು ತೊಂದರೆ ಮತ್ತು ಬಲಗಾಲಿನಲ್ಲಿ ಅಶಕ್ತತೆ ಉಂಟಾಗಿ ತೊಂದರೆ ಅನುಭವಿಸುತ್ತಿದ್ದರು. ಅವರನ್ನು ಸಮಗ್ರವಾಗಿ ತಪಾಸಿಸಿ (ಎಂಆರ್ಎ)ದಾಗ ಮಿದುಳಿನ ಎಡಭಾಗದ ತಳ ಭಾಗದಲ್ಲಿ ಗಡ್ಡೆ ಬೆಳೆದಿರುವುದು ಕಂಡುಬಂದಿತ್ತು’.
‘ಈ ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಯಿಂದ ವೈದ್ಯರು ಮತ್ತು ರೋಗಿಗಳಿಗೂ ಅನುಕೂಲ ಆಗಿದೆ. ಈ ಪ್ರಕ್ರಿಯೆಯು ಮಿದುಳನ್ನು ತೆರದು ಶಸ್ತ್ರಚಿಕಿತ್ಸೆ ನೆರವೇರಿಸವುದು ತಪ್ಪುತ್ತದೆ. ತೆರೆದ ಶಸ್ತ್ರಚಿಕಿತ್ಸೆಯು ಅತ್ಯಂತ ಅಪಾಯಕಾರಿ. ಚಿಕ್ಕ ರಂದ್ರದ ಮೂಲಕ ವೆರಿಯೋಗೈಡೆಡ್ ಬಯಾಪ್ಸಿ ಮಾಡಿ ರೆಡಿಯೇಶನ್ ಅಥವಾ ಕಿಮೋಥೆರಪಿ ಮಾಡಲು ಸಹಕಾರಿಯಾಗಲಿದೆ’ ಎಂದು ತಿಳಿಸಲಾಗಿದೆ.
ಡಾ.ಪ್ರಕಾಶ ಮಹಾಂತಶೆಟ್ಟಿ ಅವರೊಂದಿಗೆ ಡಾ.ಅಭಿಷೇಕ ಪಾಟೀಲ, ಡಾ.ವಿಕ್ರಮ ಟಿ.ಪಿ. ಹಾಗೂ ಡಾ.ಪ್ರಕಾಶ ರಾಥೋಡ ತಂಡದಲ್ಲಿದ್ದರು. ಅವರನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.