ಬೆಳಗಾವಿ: ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಅಧ್ಯಾಯ-2020’ ರಾಷ್ಟ್ರಮಟ್ಟದ ಉತ್ಸವದಲ್ಲಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜು ತಂಡ (ಸಿಬಿಎಎಲ್ಸಿ) ಚಾಂಪಿಯನ್ಶಿಪ್ ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಎಂ. ರೋಹಿತರಾಜ್, ‘ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಹೊಂದಿರುವ ಸಾಮರ್ಥ್ಯವನ್ನು ಇಡೀ ಜಗತ್ತು ಕೊಂಡಾಡುತ್ತಿದೆ. ಭಾರತ ವಿಶ್ವಗುರುವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹೀಗಾಗಿ, ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ಶಿಸ್ತು ಮತ್ತು ಬದ್ಧತೆ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ನಮ್ಮೆದುರು ಇರುವ ಸವಾಲುಗಳನ್ನು ಸ್ವೀಕರಿಸಬೇಕು. ಎಲ್ಲ ಸಂದರ್ಭಗಳನ್ನೂ ನಿರ್ವಹಿಸಲು ಸಿದ್ಧರಾಗಬೇಕು. ಅವಕಾಶಗಳನ್ನು ಬಳಸಿಕೊಳ್ಳಬೇಕು. ಆಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಪದವಿ ಪೂರೈಸುವ ವಿದ್ಯಾರ್ಥಿಗಳು ನಮ್ಮ ರಾಷ್ಟ್ರವನ್ನು ಮುಂದಿನ ಹಂತದ ಆವಿಷ್ಕಾರಗಳಿಗೆ ಕೊಂಡೊಯ್ಯಬಲ್ಲ ಉದ್ಯಮಿಗಳಾಗಬೇಕು’ ಎಂದರು.
ಕಾರ್ಯಕ್ರಮ ಸಂಯೋಜಕ ಪ್ರೊ.ವರುಣ ಜೇವರ್ಗಿ ಮಾತನಾಡಿ, ‘ಯುವ ವಿಜ್ಞಾನಿಗಳು ದೇಶದ ಪ್ರತಿ ಪ್ರಜೆಯ ಜೀವನದಲ್ಲಿ ಸುಧಾರಣೆ ತರುವ ಆವಿಷ್ಕಾರಗಳಿಗೆ ಮುಂದಾಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಮಾನವ ಕುಲದ ಅಭ್ಯುದಯಕ್ಕಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಕಾಲೇಜಿನ ಅಕ್ಷತಾ ಕಡಟೆ, ಅಮಿನ್ ಅಕಿವತ್, ಡಾ.ಚೆನ್ನರಾಜ, ರಾಧೇಶಾಮ ಹೆಡ, ಪ್ರೊ.ಆರ್.ಜಿ. ಧಾರವಾಡಕರ, ಪ್ರೊ.ಉದಯಚಂದ್ರ ಇದ್ದರು.