ಬೆಳಗಾವಿ: ಜಿಲ್ಲೆಯಲ್ಲಿ ನೆರೆಯಿಂದ ಆಗಿರುವ ಹಾನಿಯ ಪರಿಶೀಲನೆಗಾಗಿ ಕೇಂದ್ರದ ಅಧಿಕಾರಿಗಳ ತಂಡ ಭಾನುವಾರ ಪ್ರವಾಸ ಆರಂಭಿಸಿದೆ.
ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಸುಶೀಲ್ ಪಾಲ್ ನೇತೃತ್ವದ ತಂಡ ಖಾನಾಪುರ ಪಟ್ಟಣದ ಮಾರುತಿ ನಗರ ಸೇತುವೆಗೆ ಭೇಟಿ ನೀಡಿ, ಮಲಪ್ರಭಾ ನದಿಯಿಂದ ಆಗಿರುವ ಹಾನಿ ವೀಕ್ಷಿಸಿತು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಹಾನಿ ಬಗ್ಗೆ ಮಾಹಿತಿ ನೀಡಿದರು. ಬಳಿಕ, ತಂಡದ ಸದಸ್ಯರು ಖಾನಾಪುರದಲ್ಲಿ ಹಾನಿಗೀಡಾಗಿರುವ ಕೋಳಿ ಸಾಕಾಣಿಕೆ ಕೇಂದ್ರ ಹಾಗೂ ಪೊಲೀಸ್ ತರಬೇತಿ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದಕ್ಕೂ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ತಂಡವು ಹುಕ್ಕೇರಿ, ಗೋಕಾಕ, ಅಥಣಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳಲ್ಲಿ ಸೋಮವಾರದವರೆಗೆ ಪ್ರವಾಸ ನಡೆಸಲಿದೆ.