ಮುಗಳಖೋಡ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮುಖಂಡ ಮಹೇಂದ್ರ ತಮ್ಮಣ್ಣವರ ಮಾತನಾಡಿ, ‘ಬಿಜೆಪಿ ಸರ್ಕಾರವು ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ರಕ್ತ ಹೀರುತ್ತಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಾಳಿಗೆ ತೂರಿದೆ’ ಎಂದು ಆರೋಪಿಸಿದರು.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.
ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ದಸ್ತಗೀರಸಾಬ ಕಾಗವಾಡೆ ಮತ್ತು ಮಹೇಶ ತಮ್ಮಣ್ಣವರ ನೇತೃತ್ವ ವಹಿಸಿದ್ದರು. ಕುಡಚಿ ಬ್ಲಾಕ್ ಅಧ್ಯಕ್ಷ ರೇವಣ್ಣ ಸರವ, ಗಿರಮಲ್ಲ ಮಧೋಳ, ಭೀಮು ಬದನೆಕಾಯಿ, ಭೀಮಸಿ ಭನಶಂಕರಿ, ಅಶೋಕ ಕೊಪ್ಪದ, ಅಣ್ಣಪ್ಪ ಸೊಂಟನ್ನವರ, ಸಂಗಪ್ಪ ಹಿಪ್ಪರಗಿ, ಮಾರುತಿ ರಗಟಿ, ಹಣಮಂತ ಗಸ್ತಿ ಇದ್ದರು.