ಬೆಳಗಾವಿ: ಭಾನುವಾರ ಘಟಿಸಿದ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸಡ್ಡು ಹೊಡೆದ ಇಲ್ಲಿನ ಮಾನವ ಬಂಧುತ್ವ ವೇದಿಕೆಯವರು ಬಾಡೂಟ ಸೇವನೆ ಮಾಡಿದರು.
ಇಲ್ಲಿನ ನೆಹರು ನಗರದಲ್ಲಿರುವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯ ರಾಜ್ಯ ಘಟಕದ ಸಂಚಾಲಕ ರವೀಂದ್ರ ನಾಯ್ಕರ ನೇತೃತ್ವದಲ್ಲಿ ಸಂಚಾಲಕರು, ಪ್ರಗತಿಪರರು, ಸಮಾನ ಮನಸ್ಕರು ಭಾಗಿಯಾಗಿ ಊಟ ಸೇವಿಸಿದರು.
ಜನರು ಮೌಢ್ಯದಿಂದ ಹೊರಬರಬೇಕು. ಅವರು ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳ ಸಂದರ್ಭದಲ್ಲಿ ಮೌಢ್ಯ ಆಚರಣೆ ಕೈಬಿಡಬೇಕು. ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಈ ಕಾರ್ಯಕ್ರಮ ಮಾಡಲಾಯಿತು ಎಂದು ರವೀಂದ್ರ ತಿಳಿಸಿದರು.
ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲದ ರೀತಿಯಲ್ಲಿ ಬರುವ ಸಂದರ್ಭಗಳಾಗಿವೆ. ಆದರೆ, ಅವುಗಳಿಗೆ ಮೌಢ್ಯದ ಬಣ್ಣ ಹಚ್ಚಿ ಆಚರಣೆ ಮಾಡುವ ಮೂಲಕ ಜನರಲ್ಲಿ ಭಯ ಬಿತ್ತಲಾಗುತ್ತಿದೆ. ಜನರು ಮೌಢ್ಯಗಳ ಆಚರಣೆಯಿಂದ ಹೊರ ಬರಬೇಕು. ಅಲ್ಲಿಯವರೆಗೂ ಮಾನವ ಬಂಧುತ್ವ ವೇದಿಕೆಯ ಹೋರಾಟ ಮುಂದುವರಿಯುತ್ತದೆ ಎಂದರು.