ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಕೊನೆಯ ದಿನವಾದ ಮಂಗಳವಾರ ಅಂತಿಮ ಪಂದ್ಯವನ್ನು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವೀಕ್ಷಿಸಿ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಆ ಗ್ರಾಮದ ಸಿದ್ದಕಲಾ ಸಾಮಾಜಿಕ ಮತ್ತು ಕ್ರೀಡಾ ಕ್ಲಬ್ ಸಹಯೋಗದಲ್ಲಿ ನಡೆದ ಪಂದಯಾವಳಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಲಕ್ಷ್ಮಿ ತಾಯಿ ಪ್ರತಿಷ್ಠಾನ ಪ್ರಾಯೋಜಿಸಿತ್ತು. 32 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯ ಪಂತಬಾಳೇಕುಂದ್ರಿಯ ಸಲ್ಮಾನ್ ಹಾಗೂ ಯಳ್ಳೂರಿನ ಚಾಂಗಳೇಶ್ವರಿ ತಂಡಗಳ ನಡುವೆ ನಡೆಯಿತು. ಸನ್ಮಾನ್ ತಂಡ ಜಯ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಚಾಂಗಳೇಶ್ವರಿ ರನ್ನರ್ ಅಪ್ ಪಡೆಯಿತು.
‘ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಲಾಗುವುದು. ಯುವಜನರು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರೀಡಾಕೂಟಗಳಿಗೆ ಉತ್ತೇಜನ ಕೊಡಲಾಗುವುದು’ ಎಂದು ಹಟ್ಟಿಹೊಳಿ ಭರವಸೆ ನೀಡಿದರು.
ಗ್ರಾಮದ ಹಿರಿಯರು, ನಾಗೇಶ ದೇಸಾಯಿ, ಸದಾಶಿವ ಪಾಟೀಲ, ಮಲ್ಲಪ್ಪ ಕಾಂಬಳೆ, ಅಪ್ಸರ್ ಜಮಾದಾರ, ದಿಲೀಪ್ ಕೊಂಡಸ್ಕರ್, ನಿಲೇಶ ಚಂದಗಡ್ಕರ್, ಕ್ರಿಕೆಟ್ ತಂಡಗಳ ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.